ಕೇರಳ ಸರಕಾರದಲ್ಲಿ ಪರಿಶಿಷ್ಟ ಪಂಗಡ ಮತ್ತು ಯುವಜನ ಕಲ್ಯಾಣ ಸಚಿವೆಯಾಗಿರುವ ಪಿ.ಕೆ. ಜಯಲಕ್ಷ್ಮೀ ಭಾನುವಾರ ಸಾಮಾನ್ಯ ರೈತನನ್ನು ವಿವಾಹವಾಗಿ ಎಲ್ಲರನ್ನು ಚಕಿತಗೊಳಿಸಿದ್ದಾರೆ. ಉತ್ತರ ಕೇರಳದ ವಳಾಡುವಿನಲ್ಲಿರುವ ಸಚಿವೆಯ ಪೂರ್ವಿಕರ ಮನೆಯಲ್ಲಿ ಹಿಂದೂ ಬಡಕಟ್ಟು ಸಂಪ್ರದಾಯದಂತೆ ವಿವಾಹ ನೇರವೇರಿತು.
ಕಾಂಗ್ರೆಸ್ ನೇತೃತ್ವದ ಯುಡಿಎಫ್ ಸರ್ಕಾರದಲ್ಲಿ ಸಚಿವೆಯಾಗಿರುವ ಪಿ.ಕೆ ಜಯಲಕ್ಷ್ಮಿ ತಮ್ಮ ಬಾಲ್ಯದ ಗೆಳೆಯನಾಗಿರುವ ಸಿ. ಎ. ಅನಿಲ್ ಕುಮಾರ್ ಎಂಬುವವರ ಜತೆ ವಿವಾಹ ಬಂಧನಕ್ಕೆ ಒಳಗಾದರು. ಕೇರಳದ ಕುರಿಚಿಯ ಜನಾಂಗದ ಸಂಪ್ರದಾಯದಂತೆ ವಿವಾಹವನ್ನು ನೆರವೇರಿಸಲಾಯಿತು. ಅನಿಲ್ ಕುಮಾರ್ ವೃತ್ತಿಯಲ್ಲಿ ಕೃಷಿಕರಾಗಿದ್ದಾರೆ. ಜಯಲಕ್ಷ್ಮೀ ಮಾನಂತವಾಡಿ ವಿಧಾನ ಸಭೆ ಕ್ಷೇತ್ರದಿಂದ ಮೊದಲ ಬಾರಿಗೆ ಶಾಸಕಿಯಾಗಿ ಆಯ್ಕೆಯಾಗಿದ್ದಾರೆ.
ಕೇರಳ ಮುಖ್ಯಮಂತ್ರಿ ಒಮ್ಮನ್ ಚಾಂದಿ, ವಿರೋಧ ಪಕ್ಷದ ನಾಯಕ ಅಚ್ಯುತಾನಂದ, ಕೇರಳ ವಿಧಾನ ಸಭೆ ಸ್ಪೀಕರ್ ಎನ್. ಶಕ್ತನ್, ಕೆ.ಸಿ ಜೋಸೆಫ್, ರಮೇಶ್ ಚೆನ್ನಿತಾಲ ಸೇರಿದಂತೆ ಹಲವು ಸಚಿವರು ಸಮಾರಂಭದಲ್ಲಿ ಭಾಗಿಯಾಗಿದ್ದರು.