Publish Date: Fri, 19 Nov 2021 (20:41 IST)
Updated Date: Fri, 19 Nov 2021 (23:18 IST)
ಕಾಸರಗೋಡು : ಕೇರಳ ಹಾಗೂ ಕರ್ನಾಟಕ ರಾಜ್ಯಗಳ ನಡುವಣ ಸಂಚಾರ ನಿರ್ಬಂಧ ತೆರವುಗೊಳಿಸಲಾಗಿದೆ.
ಕೇರಳದಲ್ಲಿ ಕೋವಿಡ್ ಪಾಸಿಟಿವ್ ದರ ಏರಿಕೆಯಾದ ಹಿನ್ನೆಲೆಯಲ್ಲಿ ಕರ್ನಾಟಕ ಸರಕಾರ ಮುಂಜಾಗ್ರತಾ ಕ್ರಮವಾಗಿ ಗಡಿ ಮೂಲಕ ಸಂಚಾರ ನಿರ್ಬಂಧ ಹೇರಿತ್ತು. ಲಾಕ್ಡೌನ್ ತೆರವುಗೊಳಿಸಿದರೂ ನಿರ್ಬಂಧ ಹೇರಿದ್ದಲ್ಲದೆ ದ. ಕ. ಪ್ರವೇಶಕ್ಕೆ ನೆಗೆಟಿವ್ ಸರ್ಟಿಫಿಕೆಟ್ ಕಡ್ಡಾಯಗೊಳಿಸಲಾಗಿತ್ತು. ಇದರಿಂದಾಗಿ ಕರ್ನಾಟಕವನ್ನೇ ಆಶ್ರಯಿಸಿರುವ ಕಾಸರಗೋಡು ಜಿಲ್ಲೆಯ ವಿದ್ಯಾರ್ಥಿಗಳು, ಉದ್ಯೋಗಾರ್ಥಿಗಳು ಹಾಗೂ ಇತರ ಉದ್ದೇಶಕ್ಕಾಗಿ ಸಂಚರಿಸುವವರಿಗೆ ಅನನುಕೂಲವಾಗಿತ್ತು.
ದ. ಕ. ಜಿಲ್ಲಾಧಿಕಾರಿಗಳು ಅಂತಾರಾಜ್ಯ ಸಂಚಾರಕ್ಕೆ ಅನುಕೂಲವಾಗುವಂತೆ ನಿರ್ಬಂಧ ತೆರವುಗೊಳಿಸಿದ್ದಾರೆ. ಇದರಂತೆ ಶುಕ್ರವಾರದಿಂದ ಕಾಸರಗೋಡು - ಮಂಗಳೂರು, ಕಾಸರಗೋಡು - ಪುತ್ತೂರು ಹಾಗೂ ಕಾಸರಗೋಡು - ಸುಳ್ಯ ಮಾರ್ಗದಲ್ಲಿ ಬಸ್ ಸಂಚಾರ ಆರಂಭಗೊಂಡಿದೆ.
ಶುಕ್ರವಾರ ಕಾಸರಗೋಡಿನಿಂದ ಮಂಗಳೂರು ಕಡೆಗೆ ಕೇರಳ ರಸ್ತೆ ಸಾರಿಗೆ ಬಸ್ಗಳು ಹಾಗೂ ಮಂಗಳೂರಿನಿಂದ ಕಾಸರಗೋಡಿಗೆ ಕರ್ನಾಟಕ ರಸ್ತೆ ಸಾರಿಗೆ ಬಸ್ಗಳು ಸಂಚಾರ ನಡೆಸಿವೆ. ಕಾಸರಗೋಡಿನಿಂದ ಮಂಗಳೂರಿಗೆ ಶುಕ್ರವಾರ 26 ಕೆಎಸ್ಆರ್ಟಿಸಿ ಬಸ್ಗಳು ಸಂಚಾರ ಆರಂಭಿಸಿವೆ. ಅದೇ ರೀತಿ ಮಂಗಳೂರಿನಿಂದ 24 ಕರ್ನಾಟಕ ರಸ್ತೆ ಸಾರಿಗೆ ಬಸ್ ಸಹ ಸಂಚಾರ ಆರಂಭಿಸಿದೆ. ಪುತ್ತೂರು, ಸುಳ್ಯ ಕಡೆಗೂ ಬಸ್ ಆರಂಭಗೊಂಡಿದೆ.