ನಾನು ಮಾತನಾಡಿದರೆ, ಸಂಪೂರ್ಣ ದೇಶವೇ ನಡುಗಬಹುದು ಎಂದು ಹೇಳುವುದರ ಮೂಲಕ ಭೃಷ್ಟಾಚಾರ ಆರೋಪದಡಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಮಹಾರಾಷ್ಟ್ರದ ಮಾಜಿ ಸಚಿವ, ಹಿರಿಯ ಬಿಜೆಪಿ ನಾಯಕ ಏಕನಾಥ ಖಡ್ಸೆ ವಿವಾದವೊಂದನ್ನು ಮೈಗೆಳೆದುಕೊಂಡಿದ್ದಾರೆ.
ಗುರುವಾರ ಸಂಜೆ ತವರು ಕ್ಷೇತ್ರ ಜಲಂಗಾವ್ನಲ್ಲಿ ತಮ್ಮ ಬೆಂಬಲಿಗರನ್ನುದ್ದೇಶಿಸಿ ಮಾತನ್ನಾಡುತ್ತಿದ್ದ ಖಡ್ಸೆ, ನನ್ನ ವಿರುದ್ಧ ಆರೋಪ ಕೇಳಿ ಬರುತ್ತಿದ್ದಂತೆ ನಾನು ರಾಜೀನಾಮೆ ನೀಡಿರಬಹುದು. ಆದರೆ ಒಂದು ವೇಳೆ ನಾನು ಬಾಯಿ ತೆರೆದರೆ ಸಂಪೂರ್ಣ ದೇಶವೇ ನಡುಗಿ ಹೋಗಬಹುದು ಎಂದು ಹೇಳಿದ್ದಾರೆ.
ವಿಧಾನಸಭಾ ಚುನಾವಣೆಗೂ ಮೊದಲು ಸೇನೆಯ ಜತೆ ಮೈತ್ರಿ ಮುರಿದುಕೊಳ್ಳುವ ಗಟ್ಟಿ ನಿರ್ಧಾರ ಕೈಗೊಂಡು ಬಿಜೆಪಿ ರಾಜ್ಯದಲ್ಲಿ ಕೇಸರಿ ಮೈತ್ರಿಯ ನೇತೃತ್ವವನ್ನು ಹೊಂದಿರುವುದಕ್ಕೆ ಕಾರಣ ನಾನೇ ಎನ್ನುವುದರ ಮೂಲಕ ಅವರು ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರಿಗೆ ಖಡ್ಸೆ ಟಾಂಗ್ ನೀಡಿದ್ದಾರೆ.
ಬಿಜೆಪಿ ಮತ್ತು ಶಿವಸೇನೆ ನಡುವಿನ ಮೈತ್ರಿ ವಿಧಾನಸಭಾ ಚುನಾವಣೆಯ ಮೊದಲು ತುಂಡಾಗದೇ ಇದ್ದಿದ್ದರೆ ಸೇನೆಯವರೇ ಮುಖ್ಯಮಂತ್ರಿಯಾಗಿರುತ್ತಿದ್ದರು. ಮೈತ್ರಿ ಮುರಿಯುವ ಕಠಿಣ ನಿರ್ಧಾರ ಕೈಗೊಂಡಿದ್ದು ನಾನೇ. ಹೀಗಾಗಿಯೇ ಇಂದು ಬಿಜೆಪಿಯವರು ಈಗ ಮುಖ್ಯಮಂತ್ರಿಯಾಗಿದ್ದಾರೆ ಎಂದ ಅವರು ತಮ್ಮಿಂದಾಗಿಯೇ ಫಡ್ನವಿಸ್ ಸಿಎಂ ಆಗಿದ್ದಾರೆ ಎಂದು ಪ್ರತಿಪಾದಿಸಿದ್ದಾರೆ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.