Publish Date: Sun, 30 Jul 2017 (08:13 IST)
Updated Date: Sun, 30 Jul 2017 (08:17 IST)
ಬೆಂಗಳೂರು:ಏರ್ ಒಡಿಶಾ ಸಂಸ್ಥೆ ಚೆನ್ನೈ- ಮೈಸೂರು ಮಾರ್ಗದಲ್ಲಿ ನಿತ್ಯ ವಿಮಾನ ಸೇವೆ ಕಲ್ಪಿಸಲು ಮುಂದಾಗಿದೆ.ಚೆನ್ನೈನಿಂದ ಹೊರಟ ವಿಮಾನ ಮೈಸೂರಿಗೆ ರಾತ್ರಿ 8.45ಕ್ಕೆ ಆಗಮಿಸಲಿದೆ. ಮತ್ತೆ ರಾತ್ರಿ 9ಕ್ಕೆ ಚೆನ್ನೈಗೆ ಪ್ರಯಾಣಿಸಲಿದೆ.
ಕೇಂದ್ರ ಸರ್ಕಾರದ ಉಡಾನ್ ಯೋಜನೆಯಡಿಯಲ್ಲಿ ಸೆಪ್ಟೆಂಬರ್ ನಲ್ಲಿ ಈ ವಿಮಾನ ಹಾರಾಟ ಸೇವೆ ಆರಂಭವಾಗಲಿದೆ. ನಾಗರಿಕ ವಿಮಾನಯಾನ ಸಚಿವಾಲಯವು ಏರ್ ಒಡಿಶಾ ಮತ್ತು ಮೇಘಾ ಏರ್ವೇಸ್ ಪ್ರೈವೇಟ್ ಲಿಮಿಟೆಡ್ ಜತೆ ಮೂರು ವರ್ಷಗಳ ಅವಧಿಗೆ ಒಪ್ಪಂದ ಮಾಡಿಕೊಂಡಿದೆ. ಏರ್ ಒಡಿಶಾ ಸಂಸ್ಥೆಯ ಅಧಿಕಾರಿಗಳು ಕೆಲದಿನಗಳ ಹಿಂದೆ ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿದ್ದು, ವಿಮಾನ ಹಾರಾಟದ ವೇಳಾಪಟ್ಟಿ ಅಂತಿಮಗೊಳಿಸಿದ್ದಾರೆ ಎಂದು ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದ ನಿರ್ದೇಶಕ ಮನೋಜ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
ಟ್ರು ಜೆಟ್ ತನ್ನ ವೇಳಾಪಟ್ಟಿಯನ್ನು ಶೀಘ್ರದಲ್ಲೇ ಅಂತಿಮಗೊಳಿಸಲಿದೆ. ದಸರಾ ಅವಧಿಯಲ್ಲೇ ವಿಮಾನ ಸೇವೆ ಆರಂಭವಾಗುವುದು ಪ್ರವಾಸಿಗರಿಗೆ ಅನುಕೂಲ ಕಲ್ಪಿಸಲಿದೆ. ಏರ್ ಒಡಿಶಾ ಸಂಸ್ಥೆ ವಿಮಾನದಲ್ಲಿ 19 ಮತ್ತು ಟ್ರು ಜೆಟ್ ವಿಮಾನದಲ್ಲಿ 72 ಮಂದಿ ಪ್ರಯಾಣಿಸಬಹುದು.