ಚುನಾವಣಾ ಪ್ರಚಾರದ ವೇಳೆ ನೀಡಿದ್ದ ಹೇಳಿಕೆಯೀಗ ಅರವಿಂದ ಕೇಜ್ರಿವಾಲ್ಗೆ ಸಂಕಷ್ಟ ತಂದಿಟ್ಟಿದ್ದು, ಚುನಾವಣಾ ಆಯೋಗದಿಂದ ಅವರು ನೋಟಿಸ್ ಪಡೆದಿದ್ದಾರೆ.
ಗೋವಾದಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿದ್ದ ಸಂದರ್ಭದಲ್ಲಿ ಕೇಜ್ರಿವಾಲ್ ಬಿಜೆಪಿ, ಕಾಂಗ್ರೆಸ್ ಎಷ್ಟೇ ದುಡ್ಡು ಕೊಟ್ಟರೂ ತೆಗೆದುಕೊಳ್ಳಿ. ಹೊಸ ನೋಟನ್ನು ಮಾತ್ರ ಸ್ವೀಕರಿಸಿ. ಹಣದುಬ್ಬರವನ್ನು ಗಮನದಲ್ಲಿಟ್ಟುಕೊಂಡು 5,000 ನೀಡಿದರೆ 10,000 ಕೇಳಿ ಪಡೆದುಕೊಳ್ಳಿ. ಆದರೆ ನಮ್ಮ ಪಕ್ಷಕ್ಕೆ ಮತ ನೀಡಿ ಎಂದು ಜನರಿಗೆ ಕರೆ ಕೊಟ್ಟಿದ್ದರು.
ಈ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿರುವ ಆಯೋಗ ಮತ್ತೀಗ ಕೇಜ್ರಿವಾಲ್ ವಿರುದ್ಧ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ ಆಧಾರದ ಮೇಲೆ ದೂರು ದಾಖಲಿಸಿದ್ದು, ಜನವರಿ 19ರೊಳಗೆ ಉತ್ತರಿಸಿ, ಇಲ್ಲದಿದ್ದರೆ ನಾವು ನಿಮಗೆ ಸೂಚನೆ ನೀಡದೆ ಕ್ರಮ ಕೈಗೊಳ್ಳುತ್ತೇವೆ ಎಂದು ಆಯೋಗ ಎಚ್ಚರಿಕೆ ನೀಡಿದೆ.
ದೆಹಲಿ ಸಿಎಂ ಹೇಳಿಕೆ ಲಂಚಕ್ಕೆ ಪ್ರೋತ್ಸಾಹ ನೀಡಿದಂತಿದ್ದು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗಿದೆ ಎಂದು ಆಯೋಗ ಹೇಳಿದೆ.