ಭೂಗತ ದೊರೆ ದಾವೂದ್ ಇಬ್ರಾಹಿಂ ದೆಹಲಿ ನಗರವನ್ನು ಗುರಿಯಾಗಿಸಿ ಉಗ್ರರ ದಾಳಿಗಳನ್ನು ನಡೆಸಲು ಸಂಚು ರೂಪಿಸಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಪಾಕಿಸ್ತಾನದಲ್ಲಿ ಅಡಗಿದ್ದಾನೆ ಎನ್ನಲಾದ ದಾವೂದ್, 1993 ರಲ್ಲಿ ಮುಂಬೈನಲ್ಲಿ ನಡೆಸಿದ ಸರಣಿ ಬಾಂಬ್ಸ್ಫೋಟದಲ್ಲಿ 257 ಜನ ಸಾವನ್ನಪ್ಪಿದ ಘಟನೆಯಂತೆ ದೆಹಲಿಯಲ್ಲಿ ಅಂತಹದೆ ದಾಳಿ ನಡೆಸುವಂತೆ ತನ್ನ ಬೆಂಬಲಿಗರಿಗೆ ಆದೇಶ ನೀಡಿದ್ದಾನೆ ಎನ್ನಲಾಗಿದೆ.
ನಕಲಿ ನೋಟಿನ ಜಾಲ , ಮಾದಕ ವಸ್ತು ಕಳ್ಳಸಾಗಾಣೆಯಲ್ಲಿ ತೊಡಗಿದ್ದ ದಾವೂದ್, ಇದೀಗ ದೇಶಾದ್ಯಂತ ಉಗ್ರರ ದಾಳಿಗಳನ್ನು ನಡೆಸುವತ್ತ ಗಮನಹರಿಸಿರುವುದು ಆತಂಕವನ್ನು ಸೃಷ್ಟಿಸಿದೆ.
ಗುಪ್ತಚರ ಅಧಿಕಾರಿಗಳ ಪ್ರಕಾರ, ದಾವುದ್ ಇಬ್ರಾಹಿಂ ಮಧ್ಯಪ್ರದೇಶ ಮೂಲದ ಬಾಡಿಗೆ ಹಂತಕರಿಗೆ ನಿರ್ದೇಶನ ನೀಡಿದ್ದು ದೆಹಲಿ ಮೇಲೆ ಉಗ್ರ ದಾಳಿಯನ್ನು ನಡೆಸುವಂತೆ ಆದೇಶಿಸಿದ್ದಾನೆ ಎಂದು ತಿಳಿಸಿದ್ದಾರೆ.
ಮಧ್ಯಪ್ರದೇಶದ ಬಾಡಿಗೆ ಹಂತಕರು ಈಗಾಗಲೇ ದೆಹಲಿ ನಗರವನ್ನು ಪ್ರವೇಶಿಸಿದ್ದು, ಉಗ್ರ ದಾಳಿಗಾಗಿ ಸಂಚು ರೂಪಿಸಿದ್ದಾರೆ ಎನ್ನಲಾಗಿದೆ.
ದೆಹಲಿ ಪೊಲೀಸರು ಮತ್ತು ಭದ್ರತಾ ಪಡೆಗಳು ದಾವುದ್ ಬಾಡಿಗೆ ಹಂತಕರನ್ನು ವಶಕ್ಕೆ ತೆಗೆದುಕೊಳ್ಳಲು ಭಾರಿ ಕಾರ್ಯಾಚರಣೆ ಕೈ ಗೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇಂದಿರಾ ಗಾಂಧಿ ಇಂಟರ್ನ್ಯಾಷನಲ್ ಏರ್ಪೋರ್ಟ್, ದೆಹಲಿ ಮೆಟ್ರೋ, ವಿಧಾನಸಭಾ, ನವದೆಹಲಿ ರೈಲ್ವೆ ನಿಲ್ದಾಣ ಉಗ್ರರ ಪ್ರಮುಖ ಗುರಿಗಳಾಗಿವೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.