Publish Date: Tue, 17 Jun 2014 (11:59 IST)
Updated Date: Tue, 17 Jun 2014 (12:27 IST)
ಐದು ರಾಜ್ಯಗಳ ರಾಜ್ಯಪಾಲರು ಯುಪಿಎ ಸರ್ಕಾರದಿಂದ ನೇಮಕವಾದ ರಾಜ್ಯಪಾಲರಾಗಿರುವುದರಿಂದ ಅವರ ಬದಲಾವಣೆಗೆ ಕೇಂದ್ರಸರ್ಕಾರ ಚಿಂತನೆ ನಡೆಸಿದೆ. ಉತ್ತರಪ್ರದೇಶ, ಮಧ್ಯಪ್ರದೇಶ, ಪಶ್ಚಿಮಬಂಗಾಳ, ಪಂಜಾಬ್ , ಕೇರಳ ರಾಜ್ಯಪಾಲನ್ನು ಬದಲಾಯಿಸುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.
ಉತ್ತರಪ್ರದೇಶದ ರಾಜ್ಯಪಾಲ ಬಿ.ಎಲ್. ಜೋಷಿ, ಕೇರಳ ರಾಜ್ಯಪಾಲೆ ಶೀಲಾ ದೀಕ್ಷಿತ್, ಪಂಜಾಬ್ ರಾಜ್ಯಪಾಲ ಶಿವರಾಜ್ ಪಾಟೀಲ್, ಮಧ್ಯಪ್ರದೇಶ ರಾಜ್ಯಪಾಲ ರಾಮ್ ನರೇಶ್ ಯಾದವ್ ಮತ್ತು ಪಶ್ಚಿಮ ಬಂಗಾಳ ರಾಜ್ಯಪಾಲ ಎಂ.ಕೆ. ನಾರಾಯಣ್ ಅವರನ್ನು ಬದಲಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ. ಐವರು ರಾಜ್ಯಪಾಲರು ಯುಪಿಎ ಸರ್ಕಾರದಿಂದ ನೇಮಕವಾದ ರಾಜ್ಯಪಾಲರಾಗಿರುವುದರಿಂದ ಇವರನ್ನು ಅರ್ಹತೆ ಆಧಾರದ ಮೇಲೆ ನೇಮಕಮಾಡಿಲ್ಲ ಎಂದು ಬಿಜೆಪಿ ಮುಖಂಡರು ದನಿಎತ್ತಿದ್ದಾರೆ.
ಏತನ್ಮಧ್ಯೆ ರಾಜ್ಯಪಾಲರ ಬದಲಾವಣೆಗೆ ಕಾಂಗ್ರೆಸ್ ಅಪಸ್ವರವೆತ್ತಿದೆ. ರಾಜ್ಯಪಾಲರನ್ನು ಸ್ಥಾನ ತೆರವು ಮಾಡುವಂತೆ ಸೂಚಿಸಬಾರದು. ಇದು ರಾಜಕೀಯ ಪ್ರೇರಿತ ಕ್ರಮ ಎಂದು ಕಾಂಗ್ರೆಸ್ ವಾಗ್ದಾಳಿ ಮಾಡಿದೆ. ರಾಜ್ಯಪಾಲರು ಅವರಾಗೇ ಸ್ಥಾನ ತ್ಯಜಿಸದಿದ್ದರೆ, ಕೇಂದ್ರ ಸರ್ಕಾರ ಅವರನ್ನು ವಜಾಗೊಳಿಸುವ ಕಠಿಣ ನಿರ್ಧಾರವನ್ನೂ ಕೈಗೊಳ್ಳಬಹುದು ಎಂದು ಹೇಳಲಾಗುತ್ತಿದೆ.
2004ರಲ್ಲಿ ಯುಪಿಎ ಅಧಿಕಾರದ ಗದ್ದುಗೆಗೆ ಏರಿದಾಗ ಎನ್ಡಿಎ ನೇಮಿಸಿದ್ದ ರಾಜ್ಯಪಾಲರನ್ನು ಬದಲಾವಣೆ ಮಾಡಿತ್ತು. ಆದರೆ ಸುಪ್ರೀಂಕೋರ್ಟ್ ರಾಜಕೀಯ ಕಾರಣಗಳಿಗಾಗಿ ರಾಜ್ಯಪಾಲರನ್ನು ಬದಲಾಯಿಸಬಾರದು ಎಂದು ಈ ಮುಂಚೆಯೇ ಆದೇಶ ನೀಡಿದೆ. ಇನ್ನು ಕರ್ನಾಟಕ ಸೇರಿದಂತೆ ಕೆಲವು ರಾಜ್ಯಪಾಲರ ಅವಧಿ ಒಂದೆರಡು ತಿಂಗಳಲ್ಲಿ ಮುಗಿಯಲಿದ್ದು, ಇನ್ನೈದು ವರ್ಷಗಳ ಕಾಲಕ್ಕೆ ಅಧಿಕಾರಾವಧಿಯ ಮುಂದುವರಿಕೆಯನ್ನು ಕೇಂದ್ರ ಸರ್ಕಾರ ನಿರಾಕರಿಸುತ್ತದೆಯೆಂದು ತಿಳಿದುಬಂದಿದೆ. ಏತನ್ಮಧ್ಯೆ ಬಿಜೆಪಿಯ ಮುರಳಿ ಮನೋಹರ್ ಜೋಷಿ, ಟಾಂಡನ್ ಮುಂತಾದವರ ಹೆಸರು ಖಾಲಿಯಾದ ರಾಜ್ಯಪಾಲರ ಸ್ಥಾನಗಳಿಗೆ ಕೇಳಿಬರುತ್ತಿದೆ.