Publish Date: Thu, 23 Jun 2022 (07:10 IST)
Updated Date: Thu, 23 Jun 2022 (09:13 IST)
ಮುಂಬೈ : ಕೊರೊನಾ ಪಾಸಿಟಿವ್ ವರದಿಯಾಗಿದ್ದರೂ ಕೊರೊನಾ ನಿಯಮ ಉಲ್ಲಂಘಿಸಿ ಬೆಂಬಲಿಗರನ್ನು ಭೇಟಿಯಾದ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ವಿರುದ್ಧ ಬಿಜೆಪಿ ಮುಖಂಡ ತಜೀಂದರ್ ಬಗ್ಗಾ ಪ್ರಕರಣ ದಾಖಲಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ರಾಜಕೀಯ ಹೈಡ್ರಾಮಾ ನಡೆಯುತ್ತಿದ್ದಂತೆ ಉದ್ಧವ್ ಠಾಕ್ರೆಗೆ ನಿನ್ನೆ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಈ ಬಗ್ಗೆ ಸಿಎಂ ಉದ್ಧವ್ ಠಾಕ್ರೆ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದರು. ಬಳಿಕ ಸಿಎಂ ಅಧಿಕೃತ ನಿವಾಸ ಹರ್ಷ ತೊರೆದು ಸ್ವಂತ ನಿವಾಸಕ್ಕೆ ತೆರಳಿದ್ದರು.
ಈ ವೇಳೆ ಆಗಮಿಸಿದ್ದ ಬೆಂಬಲಿಗರನ್ನು ಉದ್ಧವ್ ಠಾಕ್ರೆ ಭೇಟಿಯಾಗಿದ್ದರು. ಕೊರೊನಾ ನಿಯಮದ ಪ್ರಕಾರ ಸೋಂಕು ದೃಢಪಟ್ಟವರು ಐಸೋಲೇಷನ್ನಲ್ಲಿ ಇದ್ದು ಯಾರನ್ನು ಸಂಪರ್ಕ ಮಾಡಬಾರದು. ಆದರೆ ಉದ್ಧವ್ ಠಾಕ್ರೆ ಕೊರೊನಾ ನಿಯಮವನ್ನು ಮುರಿದು ಬೆಂಬಲಿಗರನ್ನು ಭೇಟಿಯಾಗಿ ನಿಯಮ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ತಜೀಂದರ್ ಬಗ್ಗಾ ಮಲಬಾರ್ ಹಿಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.