Publish Date: Thu, 14 Mar 2019 (15:35 IST)
Updated Date: Thu, 14 Mar 2019 (15:36 IST)
ಮುಜಾಫರ್ ನಗರ: ನೂರಾರು ಬೈಕ್ ಸವಾರಿಯ ಮೂಲಕ ರ್ಯಾಲಿಯನ್ನು ನಡೆಸಿ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿದ ಆರೋಪದ ಮೇಲೆ ಉತ್ತರಪ್ರದೇಶದ ಭೀಮ್ ಸೇನೆಯ ಮುಖ್ಯಸ್ಥ ಚಂದ್ರಶೇಖರ್ ಅಜಾದ್ ಹಾಗೂ ಆತನ ಬೆಂಬಲಿಗರನ್ನು ಪೊಲೀಸರು ಬಂಧಿಸಿದ್ದಾರೆ. ಚಂದ್ರಶೇಖರ್ರನ್ನು ಬಂಧಿಸುತ್ತಿದ್ದಂತೆ ಅನಾರೋಗ್ಯಕ್ಕೆ ಒಳಗಾಗಿರುವುದರಿಂದ ಅಲ್ಲಿನ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ದಿನೇಶ್ ಕುಮಾರ್ ತಿಳಿಸಿದ್ದಾರೆ.
ಚುನಾವಣಾ ಆಯೋಗದಿಂದ ನೀತಿ ಸಂಹಿತೆ ಘೋಷಣೆಯಾಗಿದ್ದರೂ ಸಹ ಮುಜಾಫರ್ ನಗರದ ಕಡೆಗೆ ಬೈಕ್ ಮತ್ತು ಇತರ ವಾಹನಗಳಲ್ಲಿ ರ್ಯಾಲಿ ನಡೆಸಲು ಯೋಜಿಸಿದ್ದರಿಂದ ಅವರನ್ನು ಬಂಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಉತ್ತರಪ್ರದೇಶದ ಶಹರಾನ್ಪುರ ಜಿಲ್ಲೆಯ ಡಿಯೋಬಾಂದ್ ಪೊಲೀಸರು ಚಂದ್ರಶೇಖರ್ ಹಾಗೂ ಆತನ ಬೆಂಬಲಿಗರನ್ನು ಬಂಧಿಸಿರುವುದಾಗಿ ತಿಳಿದುಬಂದಿದೆ.
ನವದೆಹಲಿಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಚಂದ್ರಶೇಖರ್, ಪ್ರಧಾನಿ ಮೋದಿ, ಕೇಂದ್ರ ಸಚಿವೆ ಸ್ಮೃತಿ ಇರಾನಿ, ವಿರುದ್ಧ ಪ್ರತಿಪಕ್ಷಗಳು ಪ್ರಬಲವಾದ ಅಭ್ಯರ್ಥಿಗಳನ್ನು ನೇಮಿಸುವಲ್ಲಿ ವಿಫಲವಾದರೆ ಭೀಮ್ ಆರ್ಮಿಯಿಂದ ಸದೃಢ ಅಭ್ಯರ್ಥಿಗಳನ್ನು ಚುನಾವಣಾ ಕಣಕ್ಕಿಳಿಸಲಾಗುತ್ತದೆ ಎಂದು ಹೇಳಿದ್ದರು.