Publish Date: Thu, 24 Sep 2015 (16:05 IST)
Updated Date: Thu, 24 Sep 2015 (16:06 IST)
ಕೌಟಂಬಿಕ ದೌರ್ಜನ್ಯ ಪ್ರಕರಣ ಎದುರಿಸುತ್ತಿರುವ ಶಾಸಕ ಸೋಮನಾಥ್ ಭಾರ್ತಿ ಪೊಲೀಸರಿಗೆ ಶರಣಾಗುವುದು ಸೂಕ್ತ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಸಲಹೆ ನೀಡಿದ್ದಾರೆ.
ದೆಹಲಿ ಹೈಕೋರ್ಟ್ ಭಾರ್ತಿಯವರ ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕರಿಸಿದ ನಂತರ ಕಾಣೆಯಾಗಿರುವ ಭಾರ್ತಿ, ಸುಪ್ರೀಂಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿದ್ದಾರೆ ಎನ್ನುವ ವರದಿಗಳ ಹಿನ್ನೆಲೆಯಲ್ಲಿ ಕೇಜ್ರಿವಾಲ್ ತಮ್ಮ ಪಕ್ಷದ ಶಾಸಕನಿಗೆ ಕಿವಿಮಾತು ಹೇಳಿದ್ದಾರೆ.
ಸೋಮನಾಥ್ ಭಾರ್ತಿ ಪ್ರಕರಣದ ಬಗ್ಗೆ ಮೊದಲ ಬಾರಿಗೆ ಮೌನ ಮುರಿದಿರುವ ಕೇಜ್ರಿವಾಲ್, ಸೋಮನಾಥ್ ಪೊಲೀಸರಿಗೆ ಶರಣಾಗಬೇಕು. ಯಾಕೆ ತಪ್ಪಿಸಿಕೊಂಡು ಓಡಾಡುತ್ತಿದ್ದಾರೆ. ಜೈಲಿಗೆ ಹೋಗಲು ಯಾಕೆ ಹೆದರುತ್ತಿದ್ದಾರೆ? ಪಕ್ಷ ಮತ್ತು ಕುಟುಂಬಕ್ಕೆ ಇಕ್ಕಟ್ಟಿನ ಸ್ಥಿತಿ ತಂದಿಡುತ್ತಿದ್ದಾರೆ. ಪೊಲೀಸರೊಂದಿಗೆ ಸಹಕರಿಸಲಿ ಎಂದು ಟ್ವೀಟ್ ಮಾಡಿದ್ದಾರೆ.
ಕೇಜ್ರಿವಾಲ್ ಹೇಳಿಕೆಯನ್ನು ಸ್ವಾಗತಿಸಿರುವ ಸೋಮನಾಥ್ ಭಾರ್ತಿ ಪತ್ನಿ ಲಿಪಿಕಾ ಮಿತ್ರಾ, ಕೇಜ್ರಿವಾಲ್ ನನ್ನ ದೂರಿನ ಬಗ್ಗೆ ಪ್ರತಿಕ್ರಿಯೆ ನೀಡಿದ್ದಕ್ಕೆ ಧನ್ಯವಾದಗಳು ಎಂದು ಹೇಳಿದ್ದಾರೆ.
ಆದರೆ, ಕೇಜ್ರಿವಾಲ್ ಹೇಳಿಕೆ ಸೋಮನಾಥ್ ಭಾರ್ತಿಯನ್ನು ಪಕ್ಷದಿಂದ ದೂರವಿಡುವ ತಂತ್ರವಾಗಿದೆ. ಅವರನ್ನು ವಿಧಾನಸಭೆಯಿಂದ ವಜಾಗೊಳಿಸಿ ಎಂದು ಬಿಜೆಪಿ ಒತ್ತಡ ಹೇರಿದೆ.