ಪಾಕಿಸ್ತಾನ್ ಮೂಲದ ಲಷ್ಕರ್- ಇ-ತೈಬಾ ಭಯೋತ್ಪಾದಕರಿಂದ ಹತ್ಯೆಯಾಗಿರುವ ಸಿಆರ್ಪಿಎಫ್ ಸೈನಿಕರಿಗೆ ಗೌರವಾರ್ಪಣೆ ಸಲ್ಲಿಸಿ ದುಃಖ ವ್ಯಕ್ತ ಪಡಿಸಿರುವ ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ, ಧರ್ಮದ ಹೆಸರಲ್ಲಿ ನಡೆಸಲಾಗಿರುವ ಈ ಅನಾಗರಿಕ ಹತ್ಯೆ ನನ್ನ ಗ್ರಹಿಕೆಗೆ ಹೊರತಾಗಿದ್ದು ಎಂದು ಹೇಳಿದ್ದಾರೆ.
ಪ್ರಕ್ಷುಬ್ಧ ರಾಜ್ಯದ ಪಂಪೋರ್ನಲ್ಲಿ ಶನಿವಾರ ಉಗ್ರಗಾಮಿಗಳು ನಡೆಸಿದ ದಾಳಿಯಲ್ಲಿ 8 ಅರೆಸೇನಾ ಪಡೆ ಸಿಬ್ಬಂದಿ ಹುತಾತ್ಮರಾಗಿದ್ದರೆ ಉಳಿದ 25 ಜನ ಗಂಭೀರವಾಗಿ ಗಾಯಗೊಂಡಿದ್ದಾರೆ.
ಸಿಆರ್ಪಿಎಫ್ ಮುಖ್ಯ ಕಾರ್ಯಾಲಯ ಹಮ್ಹಾಮಾದಲ್ಲಿ ಭಾನುವಾರ ನಡೆದ ಹುತಾತ್ಮ ಸೈನಿಕರ ಗೌರವಾರ್ಪಣೆ ಕಾರ್ಯಕ್ರಮದಲ್ಲಿ ಮಾತನ್ನಾಡುತ್ತಿದ್ದ ಅವರು, ಇಸ್ಲಾಂ ಹೆಸರಿನಲ್ಲಿ, ಅದರಲ್ಲೂ ಕ್ಷಮೆ ಮತ್ತು ಶಾಂತಿಯನ್ನು ಸಾರುವ ಪವಿತ್ರ ಮಾಸ ರಮ್ಜಾನ್ ಸಂದರ್ಭದಲ್ಲಿ ಹೇಗೆ ಇಂತಹ ರಕ್ತಪಾತದಂತಹ ನಾಚಿಕೆಗೇಡು ಕೃತ್ಯದಲ್ಲಿ ತೊಡಗುತ್ತಾರೆಂಬುದನ್ನು ನನಗೆ ಅರ್ಥ ಮಾಡಿಕೊಳ್ಳಲು ಆಗುತ್ತಿಲ್ಲ ಎಂದು ಆಶ್ಚರ್ಯ ವ್ಯಕ್ತ ಪಡಿಸಿದ್ದಾರೆ.
ಇದರಿಂದ ಏನನ್ನೂ ಸಾಧಿಸಿದಂತಾಗುವುದಿಲ್ಲ. ನಾವು ಕೇವಲ ಕಾಶ್ಮೀರಕ್ಕೆ ಕೆಟ್ಟ ಹೆಸರು ತರುತ್ತಿದ್ದೇವೆ ಮತ್ತು ಶಾಂತಿಯನ್ನು ಸಾರುವ ಧರ್ಮಕ್ಕೆ ಹಿನ್ನಡೆಯನ್ನು ತರುತ್ತಿದ್ದೇವೆ ಎಂದು ಸಿಎಂ ಹೇಳಿದ್ದಾರೆ.
ಮೆಹಬೂಬಾ ಹೇಳಿಕೆಗೆ ಕ್ರೋಧವನ್ನು ವ್ಯಕ್ತ ಪಡಿಸಿರುಪ ನ್ಯಾಷನಲ್ ಕಾನ್ಫರೆನ್ಸ್, ಮೆಹಬೂಬಾ ಭಯೋತ್ಪಾದಕತೆಗೆ ಯಾವುದೇ ಧರ್ಮವಿಲ್ಲ ಎಂದು ಹೇಳುತ್ತಿದ್ದರು. ಈಗ ಭಯೋತ್ಪಾದನೆ ಎನ್ನುವುದು ಮುಸ್ಲಿಂರ ಒಂದು ಶಾಖೆ, ಇದಕ್ಕಾಗಿ ಪ್ರತಿಯೊಬ್ಬ ಮುಸ್ಲಿಂರು ಅವಮಾನವನ್ನು ಅನುಭವಿಸಬೇಕು ಎನ್ನುತ್ತಿದ್ದಾರೆ. ಮುಖ್ಯಮಂತ್ರಿಯಿಂದ ಈ ಹೇಳಿಕೆ ಹೊರಬರುತ್ತಿರುವುದು ಅವಮಾನಕರ ಎಂದಿದೆ.
ಘಟನೆ ಬಳಿಕ ಇಸ್ಲಾಮಾಬಾದ್ಗೆ ಖಡಕ್ ಎಚ್ಚರಿಕೆ ನೀಡಿರುವ ಗೃಹ ಸಚಿವ ರಾಜನಾಥ್ ಸಿಂಗ್, ನಾವೇ ಮೊದಲು ದಾಳಿ ನಡೆಸುವುದಿಲ್ಲ. ಆದರೆ ಪಾಕಿಸ್ತಾನ ಫೈಯರ್ ಮಾಡಿದರೆ ನಾವು ನಾವು ಹಾರಿಸುವ ಗುಂಡುಗಳ ಎಣಿಕೆ ಇಡುವುದಿಲ್ಲ ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.