Publish Date: Thu, 15 Jun 2017 (10:17 IST)
Updated Date: Thu, 15 Jun 2017 (10:20 IST)
ನವದೆಹಲಿ: ಯೋಗ ಗುರು ಬಾಬಾ ರಾಮ್ ದೇವ್ ವಿರುದ್ಧ ಸ್ಥಳೀಯ ನ್ಯಾಯಾಲಯವೊಂದು ಜಾಮೀನು ರಹಿತ ಬಂಧನ ವಾರಂಟ್ ಹೊರಡಿಸಿದೆ.
ಉತ್ತರ ಪ್ರದೇಶದ ರೋಹ್ಟಗ್ ನ್ಯಾಯಾಲಯ ಈ ಆದೇಶ ಹೊರಡಿಸಿದೆ. 2016 ರಲ್ಲಿ ಸದ್ಭಾವನಾ ಸಮ್ಮೇಳನದಲ್ಲಿ ಶಾಂತಿ ಕದಡುವಂತಹ ಹೇಳಿಕೆ ನೀಡಿದ್ದ ಬಾಬಾ ರಾಮ್ ದೇವ್ ವಿರುದ್ಧ ನ್ಯಾಯಾಲಯದಲ್ಲಿ ದೂರು ಸಲ್ಲಿಸಲಾಗಿತ್ತು.
ಆದರೆ ಇದರ ವಿಚಾರಣೆಗೆ ಹಾಜರಾಗಲು ವಿಫಲರಾದ ಹಿನ್ನಲೆಯಲ್ಲಿ ರಾಮ್ ದೇವ್ ವಿರುದ್ಧ ಬಂಧನ ವಾರಂಟ್ ಹೊರಡಿಸಲಾಗಿದೆ. ಭಾರತ ಮಾತಾ ಕಿ ಜೈ ಎನ್ನದವರ ತಲೆ ಕಡಿಯಬೇಕು ಎಂದು ರಾಮ್ ದೇವ್ ಅಂದು ಸಾರ್ವಜನಿಕವಾಗಿ ಕರೆ ಕೊಟ್ಟಿದ್ದರು. ಇದು ವಿವಾದಕ್ಕೆ ಕಾರಣವಾಗಿತ್ತು.
ಈ ಪ್ರಕರಣ ಸಂಬಂಧ ರಾಮ್ ದೇವ್ ಗೆ ಬಂಧನ ವಾರಂಟ್ ಆದೇಶಿಸಿದ ನ್ಯಾಯಾಧೀಶರು, ಮುಂದಿನ ವಿಚಾರಣೆಯನ್ನು ಆಗಸ್ಟ್ 3 ಕ್ಕೆ ಮುಂದೂಡಿದ್ದಾರೆ. ಹೀಗಾಗಿ ಮುಂದಿನ ವಿಚಾರಣೆಗೆ ಬಾಬಾ ನ್ಯಾಯಾಲಯಕ್ಕೆ ಹಾಜರಾಗಲೇ ಬೇಕಿದೆ.