ಮುಂಬೈ: ಅಕ್ರಮವಾಗಿ ಮಣ್ಣು ತೆಗೆಯುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳಾ ಐಪಿಎಸ್ ಅಧಿಕಾರಿ ಜೊತೆ ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ವಾಗ್ವಾದ ನಡೆಸಿದ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಅಕ್ರಮವಾಗಿ ಮಣ್ಣು ತೆಗೆಯುವ ಬಗ್ಗೆ ಸ್ಥಳಕ್ಕೆ ಬಂದು ಐಪಿಎಸ್ ಅಧಿಕಾರಿ ಅಂಜನಾ ಕೃಷ್ಣ ಪರಿಶೀಲನೆ ನಡೆಸುತ್ತಿದ್ದಾಗ ಫೋನ್ ಕರೆ ಮಾಡುವ ಅಜಿತ್ ಪವಾರ್ ನಾನು ಅಜಿತ್ ಪವಾರ್ ಮಾತನಾಡುತ್ತಿದ್ದೇನೆ, ತಕ್ಷಣವೇ ಕಾರ್ಯಾಚರಣೆ ನಿಲ್ಲಿಸಿ ತೆರಳುವಂತೆ ಸೂಚಿಸುತ್ತಾರೆ. ಆದರೆ ಪವಾರ್ ಧ್ವನಿ ಗುರುತಿಸದ ಅಂಜನಾ ನನ್ನ ಮೊಬೈಲ್ ಗೆ ಕರೆ ಮಾಡಿ ಎಂದು ಸೂಚಿಸುತ್ತಾರೆ.
ಇದರಿಂದ ಸಿಟ್ಟಿಗೇಳುವ ಅಜಿತ್ ಪವಾರ್ ನಾನು ಹೇಳಿದರೂ ಕೇಳಲ್ವಾ?ನಿನಗೆಷ್ಟು ಧೈರ್ಯ, ನಿನ್ನ ನಂಬರ್ ಕೊಡು ವಿಡಿಯೋ ಕರೆ ಮಾಡ್ತೀನಿ ಎಂದು ಬೆದರಿಸುತ್ತಾರೆ. ಅಷ್ಟೇ ಅಲ್ಲದೆ, ಬಳಿಕ ವಿಡಿಯೋ ಕರೆ ಮಾಡಿ ಅಲ್ಲಿಂದ ತೆರಳುವಂತೆ ಬೆದರಿಕೆ ಹಾಕುತ್ತಾರೆ. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಸಾಕಷ್ಟು ಆಕ್ರೋಶ ಕೇಳಿಬರುತ್ತಿದೆ. ಅಕ್ರಮವಾಗಿ ಮಣ್ಣು ತೆಗೆಯುತ್ತಿರುವವರಿಗೆ ಡಿಸಿಎಂ ಅವರೇ ಬೆಂಬಲಿಸುತ್ತಿದ್ದಾರೆ ಎಂದು ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.