ಮಳೆಯ ಅಬ್ಬರಕ್ಕೆ ಹರಿಯಾಣದ ಜನತೆ ಕಂಗಾಲಾಗಿದ್ದು ದೆಹಲಿ-ಗುರಗಾಂವ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಬರೋಬ್ಬರಿ ಹತ್ತು ಗಂಟೆಗಳಿಂದ ಟ್ರಾಫಿಕ್ ಜಾಮ್ ಉಂಟಾಗಿದೆ. ನಿನ್ನೆ ಸಂಜೆಯಿಂದ ರಸ್ತೆಯಲ್ಲಿಯೇ ಸಿಕ್ಕಿಹಾಕಿಕೊಂಡಿರುವ ವಾಹನ ಸವಾರರು ಊಟ- ನೀರಿಲ್ಲದೆ ಪರದಾಡುತ್ತಿದ್ದಾರೆ.
ನಿನ್ನೆ ಸಂಜೆ ಬಿದ್ದ ಮಳೆಯ ನಂತರ ಹಲವಾರು ಕೀಲೋಮೀಟರ್ಗಳಷ್ಟು ಉದ್ದಕ್ಕೆ ವಾಹನಗಳು ಸಾಲುಗಟ್ಟಿ ನಿಂತಿವೆ. ಸಾಯಂಕಾಲ ಕೆಲಸದಿಂದ ಮರಳುತ್ತಿದ್ದವರು ಮನೆ ಸೇರಿಲ್ಲ. ರಾತ್ರಿ ಪಾಳಿ ಕೆಲಸಕ್ಕೆ ಹೊರಟವರು ಕಚೇರಿ ತಲುಪಿಲ್ಲ. ಆಹಾರ, ನೀರು, ನಿದ್ರೆ ಇಲ್ಲದೆ ಜತೆಗೆ ಆಯಾಸಕ್ಕೊಳಗಾಗಿ ವಾಹನ ಸವಾರರು ಇಕ್ಕಟ್ಟಿನಲ್ಲಿ ಸಿಲುಕಿದ್ದಾರೆ.
ಸಂಚಾರ ಸುಗಮಗೊಳಿಸಲು ಟ್ರಾಫಿಕ್ ಪೊಲೀಸರು ನಿನ್ನೆಯಿಂದ ಹರಸಾಹಸ ಪಡುತ್ತಿದ್ದಾರೆ. ರಸ್ತೆ ಸಂಚಾರ ಸುಗಮವಾಗುವುದೆಂದು ಕಾಯುತ್ತಿದ್ದ ವಾಹನ ಸವಾರರು ಕಾರ್, ಬಸ್ ಮತ್ತು ಲಾರಿಗಳಲ್ಲಿಯೇ ನಿದ್ದೆಗೆ ಶರಣಾಗಿದ್ದರಿಂದ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿತ್ತು.
ದೆಹಲಿಯಿಂದ ಆಗಮಿಸುವ ಪ್ರಯಾಣಿಕರು ಟ್ರಾಫಿಕ್ ಜಾಮ್ ನಿಯಂತ್ರಣಕ್ಕೆ ಬರುವವರೆಗೂ ಪ್ರಯಾಣ ಕೈಗೊಳ್ಳದಂತೆ ಗುರಗಾಂವ್ ಪೊಲೀಸರು ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಟ್ವೀಟ್ ಮಾಡಿಕೊಂಡಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಗುರಗಾಂವ್ ಪೊಲೀಸ್ ಕಮಿಷನರ್ ನವದೀಪ್ ಸಿಂಗ್, ಟ್ರಾಫಿಕ್ ಪೊಲೀಸರು ತಮ್ಮ ಶಕ್ತಿ ಮೀರಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಹಲವು ರಸ್ತೆಗಳು ಜಲಾವೃತವಾಗಿದ್ದು, ಆದಷ್ಟು ಬೇಗ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದ್ದಾರೆ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.