ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆ ಕುರಿತಂತೆ ನಡೆದ ಮಾತುಕತೆಗಳು ವಿಫಲವಾದ ಹಿನ್ನೆಲೆಯಲ್ಲಿ ರಾಜ್ಯಸಭೆಗೆ ಇತ್ತೀಚಿಗೆ ರಾಜೀನಾಮೆ ನೀಡಿದ ನವಜೋತ್ ಸಿಂಗ್ ಸಿದ್ದು ತಮ್ಮ ನಿರ್ಧಾರವನ್ನು ತಡೆಹಿಡಿದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪಂಜಾಬ್ನಿಂದ ದೂರವಿರುವಂತೆ ಬಿಜೆಪಿ ಹೈಕಮಾಂಡ್ ನೀಡಿದ ಆದೇಶದಿಂದ ಅಸಮಾಧಾನಗೊಂಡಿದ್ದ ಸಿದ್ದು ಜುಲೈ 18 ರಂದು ರಾಜ್ಯಸಭೆ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. ಆಗಸ್ಟ್ 12 ರಂದು ಆಪ್ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎನ್ನುವ ವರದಿಗಳು ಹರಿದಾಡುತ್ತಿದ್ದವು.
ಪಂಜಾಬ್ ರಾಜ್ಯದಲ್ಲಿ ಶಿರೋಮಣಿ ಅಕಾಲಿ ದಳದೊಂದಿಗೆ ಮೈತ್ರಿ ಹೊಂದಿರುವ ಬಿಜೆಪಿಗೆ ನವಜೋತ್ ಸಿಂಗ್ ರಾಜೀನಾಮೆ ಹಿನ್ನೆಡೆಯಾಗಿತ್ತು. ಸಿದ್ದು ಮುಂದೆ ಯಾವ ಪಕ್ಷ ಸೇರಲಿದ್ದಾರೆ ಎನ್ನುವ ಉಹಾಪೋಹಗಳು ಹರಿದಾಡುತ್ತಿದ್ದವು. ಕಾಂಗ್ರೆಸ್ ಪಕ್ಷ ಕೂಡಾ ಪಕ್ಷಕ್ಕೆ ಸೆಳೆದುಕೊಳ್ಳಲು ಸಜ್ಜಾಗಿತ್ತು.
ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೂಡಾ ಸಿದ್ದು ರಾಜೀನಾಮೆ ನಿರ್ಧಾರವನ್ನು ಸ್ವಾಗತಿಸಿದ್ದರು. ಸಿದ್ದು ಆಪ್ ಪಕ್ಷ ಸೇರುವುದಾದರೇ ಚರ್ಚೆಗೆ ಸಿದ್ದ ಎನ್ನುವಂತೆ ಹೇಳಿಕೆ ನೀಡಿದ್ದರು.
ಮೂಲಗಳ ಪ್ರಕಾರ, ಮುಂಬರುವ ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಆಪ್ ಪಕ್ಷದ ಮುಖ್ಯಮಂತ್ರಿಯಾಗಿ ಘೋಷಿಸಬೇಕು ಮತ್ತು ತಮ್ಮ ಪತ್ನಿ ಡಾ.ನವಜೋತ್ ಕೌರ್ ಸಿದ್ದು ಅವರಿಗೆ ಪಕ್ಷದ ಟಿಕೆಟ್ ನೀಡಬೇಕು ಎನ್ನುವ ಷರತ್ತು ನವಜೋತ್ ಸಿದ್ದು ಒಡ್ಡಿದ್ದಾರೆ ಎನ್ನಲಾಗಿದೆ.
ತಾಜಾ ಸುದ್ದಿಗಳನ್ನು ಓದಲು
ಮೊಬೈಲ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ