Publish Date: Tue, 02 Aug 2016 (15:59 IST)
Updated Date: Tue, 02 Aug 2016 (16:04 IST)
ತಾವು ನಕಲಿ ಪದವಿಯನ್ನು ಹೊಂದಿರುವುದಾಗಿ ಬಿಜೆಪಿಯ ಕರಣ್ ಸಿಂಗ್ ತನ್ವರ್ ಮಾಡಿರುವ ಆರೋಪವನ್ನು ದೆಹಲಿ ಕಂಟೋನ್ಮೆಂಟ್ ಕ್ಷೇತ್ರದ ಆಮ್ ಆದ್ಮಿ ಪಕ್ಷದ ಶಾಸಕ ಸುರೇಂದರ್ ಸಿಂಗ್ ತಳ್ಳಿ ಹಾಕಿದ್ದಾರೆ.
ಸೈನ್ಯದಿಂದ ನಿವೃತ್ತರಾದ ಬಳಿಕ ಸುರೇದರ್ ನಕಲಿ ಪದವಿ ಪ್ರಮಾಣ ಪತ್ರ ಬಳಸಿಕೊಂಡು ಸರ್ಕಾರಿ ಶಾಲೆಯಲ್ಲಿ ಶಿಕ್ಷಕ ಹುದ್ದೆಯನ್ನು ಪಡೆಯಲ ಪ್ರಯತ್ನಿಸಿದ್ದರು ಎಂದು ಕಂಟೋನ್ಮೆಂಟ್ ಕ್ಷೇತ್ರದ ಮಾಜಿ ಶಾಸಕ ತನ್ವರ್ ಆರೋಪಿಸಿದ್ದರು.
ಸಿಕ್ಕಿಂ ವಿಶ್ವವಿದ್ಯಾಲಯದಿಂದ ಪಡೆದಿರುವ ಮಾಹಿತಿ ಹಕ್ಕು ಉತ್ತರದ ಆಧಾರದ ಮೇಲೆ ಅವರು ಈ ಆರೋಪವನ್ನು ಮಾಡಿದ್ದರು.
ದೆಹಲಿ ಪೊಲೀಸರು ನನ್ನ ಪದವಿ ಪ್ರಮಾಣಪತ್ರವನ್ನು ಎರಡು ಬಾರಿ ಪರಿಶೀಲಿಸಿದ್ದಾರೆ. ಇದರಲ್ಲಿ ಯಾವುದೇ ಮೋಸವಿಲ್ಲ. ಬಿಜೆಪಿಯ ಕರಣ್ ಸಿಂಗ್ ಯಾವುದೋ ಬೇರೆ ವಿಶ್ವವಿದ್ಯಾಲಯಕ್ಕೆ ಆರ್ಟಿಐ ಕಳುಹಿಸಿದ್ದಾರೆ. ತನ್ನ ಹೆಸರು ಎಮ್ಎಮ್ ಖಾನ್ ಕೊಲೆ ಪ್ರಕರಣದಲ್ಲಿ ಸಿಕ್ಕಿ ಹಾಕಿಕೊಂಡಿದ್ದ ಹಿನ್ನೆಲೆಯಲ್ಲಿ ಕಳೆದುಕೊಂಡಿರುವ ವರ್ಚಸ್ಸನ್ನು ಹೆಚ್ಚಿಸಲು ಸಿಂಗ್ ನನ್ನ ಮೇಲೆ ಸುಳ್ಳು ಆರೋಪವನ್ನು ಮಾಡುತ್ತಿದ್ದಾರೆ ಎಂದು ಅವರು ದೂರಿದ್ದಾರೆ.
ಪ್ರಧಾನಿ ಮೋದಿ ಅವರ ಯೋಜನೆಯಂತೆ ಇವರು ಆಪ್ ಶಾಸಕರನ್ನು ಗುರಿಯಾಗಿಸುತ್ತಿದ್ದಾರೆ. ಈ ಹಿಂದೆ ಕೂಡ ನನ್ನ ಮೇಲೆ ಸುಳ್ಳು ಆರೋಪ ಹೊರಿಸಲಾಗಿತ್ತು ಎಂದವರು ಕಿಡಿಕಾರಿದ್ದಾರೆ.
ನಕಲಿ ಪದವಿ ಪ್ರಮಾಣ ಪತ್ರ ಹೊಂದಿರುವ ಆರೋಪ ಎದುರಿಸುತ್ತಿರುವ ಎರಡನೆಯ ಆಪ್ ಶಾಸಕರಾಗಿದ್ದಾರೆ ಸಿಂಗ್. ಈ ಹಿಂದೆ ಕಾನೂನು ಸಚಿವ ಜಿತೆಂದರ್ ಸಿಂಗ್ ತೋಮರ್ ನಕಲಿ ಪ್ರಮಾಣ ಪತ್ರ ಹೊಂದಿರುವ ಆರೋಪದ ಮೇಲೆ ಪದತ್ಯಾಗ ಮಾಡಿದ್ದರು.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.