Publish Date: Fri, 03 Oct 2014 (17:13 IST)
Updated Date: Fri, 03 Oct 2014 (17:15 IST)
ಪ್ರಧಾನಿ ನರೇಂದ್ರ ಮೋದಿ ಕನಸಿನ 'ಸ್ವಚ್ಛ ಭಾರತ್ ಅಭಿಯಾನ'ಕ್ಕೆ ಬಾಲಿವುಡ್ ನಟ ಅಮಿರ್ ಖಾನ್ ಬೆಂಬಲ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ಅವರ ಸ್ವಚ್ಛ ಭಾರತ ಅಭಿಯಾನವನ್ನು ಸ್ವಾಗತಿಸಿರುವ ನಟ ಅಮಿರ್ ಖಾನ್, ನಾನು ನನ್ನ ಮನೆ ಮತ್ತು ಕಚೇರಿ ಬಳಿ ಇರುವ ಕಸವನ್ನು ತೆಗೆದು ಶುದ್ಧಗೊಳಿಸಿದ್ದೇನೆ. ಈ ಮೂಲಕ ಮೋದಿ ಅವರ ಮಹಾತ್ವಾಕಾಂಕ್ಷೆಯ ಸ್ವಚ್ಛ ಭಾರತ ಅಭಿಯಾನಕ್ಕೆ ನನ್ನ ಸಂಪೂರ್ಣ ಸಹಕಾರ ವ್ಯಕ್ತಪಡಿಸುತ್ತಿದ್ದೇನೆ ಎಂದು ಹೇಳಿದ್ದಾರೆ.
ದೇಶದ ಜನತೆಯೂ ಮೋದಿ ಅವರ ಸ್ವಚ್ಛ ಭಾರತ ಅಭಿಯಾನಕ್ಕೆ ಬೆಂಬಲಿಸಬೇಕು ಎಂದು ಅಮಿರ್ ಖಾನ್ ಮನವಿ ಮಾಡಿಕೊಂಡಿದ್ದಾರೆ.
ಗಾಂಧಿ ಜಯಂತಿಯ ಶುಭ ಸಮಯದಲ್ಲಿ ಸ್ವಚ್ಛ ಭಾರತ ಅಭಿಯಾನಕ್ಕೆ ಚಾಲನೆ ನೀಡುವ ಮೂಲಕ ಮೋದಿ ಅವರು ಮಹಾತ್ಮ ಗಾಂಧಿ ಅವರಿಗೆ ಉಡುಗೊರೆ ನೀಡಿದ್ದಾರೆ ಎಂದು ಅಮಿರ್ ಖಾನ್ ಹೊಗಳಿದ್ದಾರೆ.
ತಮ್ಮ ಕನಸಿನ ಅಭಿಯಾನ ಸ್ವಚ್ಛ ಭಾರತದಲ್ಲಿ ಕೈ ಜೋಡಿಸುವಂತೆ ಮೋದಿ 9 ಪ್ರತಿಷ್ಠಿತ ವ್ಯಕ್ತಿಗಳನ್ನು ಆಹ್ವಾನಿಸಿದ್ದರು. ಅವರಲ್ಲಿ ಸಲ್ಮಾನ್ ಖಾನ್, ಪ್ರಿಯಾಂಕಾ ಚೋಪ್ರಾ, ಕಮಲ್ ಹಾಸನ್, ಉದ್ಯಮಿ ಅನಿಲ್ ಅಂಬಾನಿ, ಗೋವಾ ರಾಜ್ಯಪಾಲ ಮೃದುಲಾ ಸಿನ್ಹಾ, ಕಾಂಗ್ರೆಸ್ ನಾಯಕ ಶಶಿ ಥರೂರ್, ಯೋಗ ಗುರು ಬಾಬಾ ರಾಮದೇವ್ ಮತ್ತು ಥೋರಕ್ ಮೆಹ್ತಾ ಕಾ ಉಲ್ಟಾ ಚಸ್ಮಾ ಧಾರಾವಾಹಿ ತಂಡ ಸೇರಿದೆ.
ದೆಹಲಿಯ ಮಂದಿರ ಮಾರ್ಗದಲ್ಲಿರುವ ವಾಲ್ಮೀಕಿ ಬಸ್ತಿ ಬಳಿ ಪೊರಕೆಯನ್ನು ಹಿಡಿದು ಕಸ ಗುಡಿಯುವ ಮೂಲಕ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಮಹಾತ್ವಾಕಾಂಕ್ಷೆಯ ಸ್ವಚ್ಛ ಭಾರತ ಅಭಿಯಾನಕ್ಕೆ ಕಳೆದ ಗುರುವಾರ ಅಧಿಕೃತವಾಗಿ ಚಾಲನೆ ನೀಡಿದ್ದರು.