Publish Date: Sat, 16 Jul 2022 (13:36 IST)
Updated Date: Sat, 16 Jul 2022 (14:37 IST)
ನವದೆಹಲಿ : ಪುರುಷನೊಂದಿಗೆ ಸಂಬಂಧವಿಟ್ಟುಕೊಂಡು ಆತನೊಂದಿಗೆ ಸ್ವ-ಇಚ್ಛೆಯಿಂದ ವಾಸಿಸುತ್ತಿದ್ದ ಮಹಿಳೆ ಆ ಸಂಬಂಧ ಹದಗೆಟ್ಟ ಬಳಿಕ ಅತ್ಯಾಚಾರ ಪ್ರಕರಣ ದಾಖಲಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಅತ್ಯಾಚಾರ, ಅಸಹಜ ಅಪರಾಧಗಳು ಹಾಗೂ ಕ್ರಿಮಿನಲ್ ಬೆದರಿಕೆ ಆರೋಪ ಎದುರಿಸುತ್ತಿದ್ದ ಅನ್ಸಾರ್ ಮೊಹಮ್ಮದ್ ಅವರ ಪ್ರಕರಣವನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತಾ ಮತ್ತು ವಿಕ್ರಮ್ ನಾಥ್ ಅವರಿದ್ದ ದ್ವೀ-ಸದಸ್ಯ ಪೀಠವು ಅನ್ಸಾರ್ಗೆ ಜಾಮೀನು ನೀಡಿದೆ.
ಈ ಪ್ರಕರಣದಲ್ಲಿ ಮೇಲ್ಮನವಿದಾರನಿಗೆ ನಿರೀಕ್ಷಣಾ ಜಾಮೀನು ನಿರಾಕರಿಸಿದ ರಾಜಸ್ಥಾನ ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್ ತಳ್ಳಿ ಹಾಕಿದೆ. ದೂರುದಾರೆ ಮಹಿಳೆ ಸ್ವಇಚ್ಛೆಯಿಂದ ಮೇಲ್ಮನವಿದಾರ ಅನ್ಸಾರ್ ಜೊತೆ ಇದ್ದು ಆತನೊಂದಿಗೆ ಸಂಬಂಧ ಹೊಂದಿದ್ದರು.
ಈಗ ಸಂಬಂಧ ಹದಗೆಟ್ಟಿದ್ದರೆ ಅದು ಐಪಿಸಿ ಸೆಕ್ಷನ್ 376 (2) (ಎನ್) ಅಡಿ ಪ್ರಕರಣ ದಾಖಲಿಸಲು ಆಧಾರವಾಗುವುದಿಲ್ಲ ಎಂದು ತನ್ನ ಆದೇಶದಲ್ಲಿ ತಿಳಿಸಿದೆ.