Publish Date: Mon, 30 May 2022 (12:57 IST)
Updated Date: Mon, 30 May 2022 (12:59 IST)
ಬೆಂಗಳೂರು : ಮುಂದಿನ ಶೈಕ್ಷಣಿಕ ವರ್ಷದಿಂದ ರಾಜ್ಯದ ಶಾಲೆ, ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಯೋಗ ಶಿಕ್ಷಣ ಹಾಗೂ ಯೋಗಾಭ್ಯಾಸ ಪ್ರಾರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಭಾನುವಾರ ನಗರದ ಹೊರವಲಯದ ಜಿಗಣಿ ಬಳಿಯ ಪ್ರಶಾಂತಿ ಕುಟೀರಂನಲ್ಲಿ ಎಸ್. ವ್ಯಾಸ ಸ್ವಾಯತ್ತ ವಿಶ್ವವಿದ್ಯಾಲಯ ಭಾನುವಾರ ಆಯೋಜಿಸಿದ್ದ ಯೋಗ ಸಂಶೋಧನೆ ಕುರಿತ 24ನೇ ಅಂತಾರಾಷ್ಟ್ರೀಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ನಮ್ಮ ರಾಜ್ಯದಲ್ಲೂ ಯೋಗದ ಬಗ್ಗೆ ಯೋಗಾಭ್ಯಾಸದ ಪ್ರಯೋಜನಗಳ ಬಗ್ಗೆ ದೊಡ್ಡ ಪ್ರಚಾರ ನೀಡುವ ಅವಶ್ಯಕತೆ ಇದೆ. ಅದರಲ್ಲೂ ಕೋವಿಡ್ ಬಳಿಕ ಮಕ್ಕಳು ಬೇರೆ ಬೇರೆ ರೀತಿಯ ಒತ್ತಡಗಳಿಗೆ ಒಳಗಾಗಿದ್ದಾರೆ.
ಇದರಿಂದ ಅವರನ್ನು ಹೊರಗೆ ತಂದು ಯಥಾಪ್ರಕಾರ ಬಾಲ್ಯವನ್ನು ಸಂತೋಷವಾಗಿ ಕಳೆಯುವಂತಾಗಬೇಕು. ಇದಕ್ಕೆ ಯೋಗ ಬಹಳ ಅಗತ್ಯವಿದೆ. ಹಾಗಾಗಿ ರಾಜ್ಯದಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ಶಾಲೆ, ಕಾಲೇಜುಗಳಲ್ಲಿ ಯೋಗ ಶಿಕ್ಷಣ ಮತ್ತು ಯೋಗಾಭ್ಯಾಸ ಪ್ರಾರಂಭಿಸಲಾಗುವುದು ಎಂದು ಹೇಳಿದರು.
ವಿಶೇಷವಾಗಿ ಮುಂದಿನ ವರ್ಷ ಪ್ರೌಢ ಶಾಲೆ ಮತ್ತು ಕಾಲೇಜುಗಳ ಹಂತದಲ್ಲಿ ಯೋಗ ಆರಂಭಿಸಲು ಸರ್ಕಾರ ಉದ್ದೇಶಿಸಿದೆ.