Publish Date: Wed, 05 Feb 2020 (15:47 IST)
Updated Date: Wed, 05 Feb 2020 (15:51 IST)
ಕಲಬುರಗಿಯಲ್ಲಿ ನಡೆಯುತ್ತಿರುವ 85 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ದೀಪ ಬೆಳಗುವ ಮೂಲಕ ಚಾಲನೆ ನೀಡಿದರು.
ಗುಲ್ಬರ್ಗಾ ವಿಶ್ವವಿದ್ಯಾಲಯ ಆವರಣದಲ್ಲಿನ ಶ್ರೀ ವಿಜಯ ಪ್ರಧಾನ ವೇದಿಕೆಯಲ್ಲಿ ನುಡಿ ಹಬ್ಬಕ್ಕೆ ಚಾಲನೆ ನೀಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮಾತನಾಡಿ, ಕಲಬುರಗಿ ಭಾವ್ಯಕ್ಯತೆಯ ತಾಣ. ನಾಡಿನ ಆರುವರೆ ಕೋಟಿ ಜನರಿಗೆ ಧನ್ಯಾವಾದ ಹೇಳುವೆ. ಸಾಂಸ್ಕೃತಿಕ ಕಲೆಯು ಕಲಬುರಗಿಯಲ್ಲಿ ವಿಭಿನ್ನವಾಗಿದೆ. ಶರಣರು, ಸಂತರ ನಾಡು. ಇಂಥ ಮಹತ್ವದ ನಾಡಿನಲ್ಲಿ ಸಮ್ಮೇಳನ ನಡೆಯುತ್ತಿರುವುದು ಸಂತಸದ ಸಂಗತಿ. ತೊಗರಿ ಖಣಜ ಖ್ಯಾತಿಯ ನಾಡಿನಲ್ಲಿ ಇದೀಗ ನಾಲ್ಕನೇ ಬಾರಿ ಸಮ್ಮೇಳನ ನಡೆಯುತ್ತಿದೆ.
ನಾಡು, ನುಡಿ ರಕ್ಷಣೆಗೆ ನಮ್ಮ ಸರಕಾರ ಬದ್ಧವಾಗಿದೆ. ಕಾವ್ಯ, ನಾಟಕ, ಸಾಹಿತ್ಯದಲ್ಲಿ ಛಾಪು ಮೂಡಿಸಿರುವ ಡಾ.ಎಚ್.ಎಸ್.ವೆಂಕಟೇಶ ಮೂರ್ತಿ ಸಮ್ಮೇಳನಾಧ್ಯಕ್ಷರಾಗಿರುವದು ಅತ್ಯಂತ ಸ್ವಾಗತಾರ್ಹ ವಿಷಯ ಎಂದರು.
ಹೈದ್ರಾಬಾದ್ ಕರ್ನಾಟಕಕ್ಕೆ ಕಲ್ಯಾಣ ಕರ್ನಾಟಕ ಎಂದು ಮರು ನಾಮಕರಣ ಮಾಡಲಾಗಿದೆ. 371 ಜೆ ಮೂಲಕ ಈ ಭಾಗದ ವಿದ್ಯಾರ್ಥಿಗಳಿಗೆ, ಉದ್ಯೋಗಾಂಕ್ಷಿಗಳಿಗೆ ಹೆಚ್ಚು ಅನುಕೂಲವಾಗಲಿದೆ. ಕಲಬುರಗಿ ವಿಮಾನ ನಿಲ್ದಾಣಕ್ಕೆ ಚಾಲನೆ ನೀಡಿದ್ದು, ಜಿಲ್ಲೆ ವಾಣಿಜ್ಯಕವಾಗಿ ಬೆಳವಣಿಗೆಯಾಗಲಿದೆ ಎಂದರು.
ಕನ್ನಡ ಭಾಷೆ, ನುಡಿ ಅಭಿವೃದ್ಧಿಗೆ ಸರಕಾರ ಬದ್ಧವಾಗಿದೆ. ಸರಕಾರಿ ಶಾಲೆಗಳನ್ನು ಬಲಿಷ್ಠಗೊಳಿಸಲಾಗುತ್ತಿದೆ. ಪೋಷಕರು ಸರಕಾರಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಸೇರಿಸಲು ಮುಂದಾಗಬೇಕೆಂದರು.