Publish Date: Thu, 07 Jul 2022 (16:17 IST)
Updated Date: Thu, 07 Jul 2022 (17:39 IST)
ಮಹಿಳೆಯೊಬ್ಬಳು ಬರೋಬ್ಬರಿ 15 ಲಕ್ಷ ರೂಪಾಯಿ ಬೆಲೆ ಬಾಳುವ 43 ಸವರನ್ ಚಿನ್ನಾಭರಣವನ್ನು ಎಟಿಎಂ ಕಸದ ಬುಟ್ಟಿ ಒಳಗೆ ಎಸೆದು ಬಂದ ಘಟನೆ ಕಳೆದ ಸೋಮವಾರ (ಜುಲೈ 4) ಮುಂಜಾನೆ ಚೆನ್ನೈ ಉಪನಗರ ಕುಂದ್ರಥೂರಿನ ಮುರುಗನ್ ದೇವಸ್ಥಾನದ ರಸ್ತೆಯಲ್ಲಿ ನಡೆದಿದೆ.
ಪೊಲೀಸ್ ಮೂಲಗಳ ಪ್ರಕಾರ ಚಿನ್ನಾಭರಣ ಎಸೆದ 35 ವರ್ಷದ ಮಹಿಳೆ ಮಾನಸಿಕ ಅಸ್ವಸ್ಥಳು ಎಂದು ತಿಳಿದುಬಂದಿದೆ. ಖಿನ್ನತೆಯಿಂದ ತೀವ್ರವಾಗಿ ಬಳಲುತ್ತಿರುವ ಮಹಿಳೆಗೆ ನಿದ್ರೆಯಲ್ಲಿ ನಡೆಯುವ ಕಾಯಿಲೆಯು ಇದೆ ಅಂತಾ ಪೊಲೀಸರು ತಿಳಿಸಿದ್ದಾರೆ.
ಕಸದ ಬುಟ್ಟಿಯ ಒಳಗೆ ಬ್ಯಾಗ್ ಇರುವುದನ್ನು ನೋಡಿದ ಎಟಿಎಂನ ಭದ್ರತಾ ಸಿಬ್ಬಂದಿ ತಕ್ಷಣ ಕುಂದ್ರಥೂರ್ ಪೊಲೀಸ್ ಠಾಣೆಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಬ್ಯಾಗ್ ತೆರೆದು ನೋಡಿದಾಗ ಅದರೊಳಗೆ ಚಿನ್ನಾಭರಣಗಳು ಇದ್ದವು ಎಂದು ಭದ್ರಾತಾ ಸಿಬ್ಬದಿ ಪೊಲೀಸರಿಗೆ ತಿಳಿಸಿದ್ದಾರೆ. ಇದಾದ ಬಳಿಕ ಎಟಿಎಂಗೆ ಸಂಬಂಧಿಸಿದ ಬ್ಯಾಂಕ್ನ ಮ್ಯಾನೇಜರ್ ನೆರವು ಪಡೆದು ಪೊಲೀಸ್ ದೂರು ದಾಖಲಿಸಲಾಯಿತು.
ತನಿಖಾ ವೇಳೆ ಪೊಲೀಸರು ಸಿಸಿಟಿವಿ ಕ್ಯಾಮೆರಾ ಸೆರೆಹಿಡಿದ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಓರ್ವ ಮಹಿಳೆ ಎಟಿಎಂ ಒಳಗೆ ಬಂದು ಚಿನ್ನಾಭರಣವನ್ನು ಕಸದ ಬುಟ್ಟಿಯ ಒಳಗೆ ಎಸೆದಿರುವುದು ಗೊತ್ತಾಗಿದೆ. ಇದೇ ಸಂದರ್ಭದಲ್ಲಿ ದಂಪತಿ ಜೋಡಿಯೊಂದು ತನ್ನ 35 ವರ್ಷದ ಮಗಳು ಮುಂಜಾನೆ 4ರಿಂದ ಕಾಣೆಯಾಗಿದ್ದಾಳೆಂದು ದೂರು ದಾಖಲಿಸಿರುವುದು ಪೊಲೀಸರಿಗೆ ತಿಳಿಯುತ್ತದೆ. ಅಲ್ಲದೆ, ಅದೇ ದಿನ ಪೊಲೀಸ್ ಠಾಣೆಗೆ ಕರೆ ಮಾಡುವ ದಂಪತಿ ತಮ್ಮ ಮಗಳು 7 ಗಂಟೆಗೆ ಮನೆಗೆ ಹಿಂತಿರುಗಿದಳು ಎಂದು ಮಾಹಿತಿ ನೀಡುತ್ತಾರೆ.