ಬೆಂಗಳೂರಿನಲ್ಲಿ ಸರಗಳ್ಳರ ಹಾವಳಿ ಮಿತಿಮೀರುತ್ತಿದೆ. ಬೈಕ್ ಮೇಲೆ ಬಂದು ಮಹಿಳೆಯರ ಚಿನ್ನದ ಸರ ಕಿತ್ತು ಪರಾರಿಯಾಗುವುದು ನಗರದಲ್ಲಿ ಪದೇ ಪದೇ ವರದಿಯಾಗುತ್ತಿದೆ. ಈಗ ಕಿಟಕಿ ಕಳ್ಳರು ಸಹ ಹುಟ್ಟಿಕೊಂಡಿದ್ದಾರೆ ಎಂಬುದು ಬೆಳಕಿಗೆ ಬಂದಿದೆ. ಕಿಟಕಿಯಿಂದ ಕೈ ಹಾಕಿ ಮನೆಯೊಳಗೆ ಮಲಗಿದ್ದ ವ್ಯಕ್ತಿಯೊಬ್ಬನ ಚಿನ್ನದ ಸರವನ್ನು ಎಗರಿಸಿದ ಘಟನೆ ಭುವನೇಶ್ವರಿ ನಗರದಲ್ಲಿ ನಡೆದಿದೆ.
ಪ್ರವೀಣ್ ಎಂಬುವವರು ಮನೆಯೊಳಗೆ ಮಲಗಿದ್ದ ಸಂದರ್ಭದಲ್ಲಿ ಕಿಟಕಿಯಿಂದ ಕೈ ಹಾಕಿದ ಕಳ್ಳ 20 ಗ್ರಾಂ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾನೆ.
ಕೆ ಸಿ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಳ್ಳನ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಕಳೆದೆರಡು ದಿನಗಳ ಹಿಂದೆ ಸಹ ಕಳ್ಳನೊಬ್ಬ ಕಿಟಕಿಯಿಂದ ಕೈ ಹಾಕಿ ಮಹಿಳೆಯೊಬ್ಬರ 50 ಗ್ರಾಂ ತೂಕದ ಚಿನ್ನದ ಸರವನ್ನು ಎಗರಿಸಿದ್ದ ಘಟನೆ ನಗರದಲ್ಲಿ ವರದಿಯಾಗಿತ್ತು.