Publish Date: Sun, 12 Dec 2021 (10:33 IST)
Updated Date: Sun, 12 Dec 2021 (10:37 IST)
ಯಾದಗಿರಿ : ಕೇವಲ ಐದಾರು ತಿಂಗಳ ಹಿಂದಷ್ಟೇ ಇಲ್ಲಿನ ಶಾಲಾ ಶಿಕ್ಷಕನೊಂದಿಗೆ ವಿವಾಹವಾಗಿದ್ದ, ಬೆಂಗಳೂರು ಮೂಲದ ಗೃಹಿಣಿಯೊಬ್ಬಳ ಅನುಮಾನಾಸ್ಪದ ಸಾವನ್ನಪ್ಪಿದ ಘಟನೆ ಯಾದಗಿರಿಯಲ್ಲಿ ಸೆ.25 ರಂದು ನಡೆದಿತ್ತು.
ಯಾದಗಿರಿ ನಗರದ ಮಾತೆ ಮಾಣಿಕೇಶ್ವರಿ ಕಾಲೋನಿಯಲ್ಲಿ ವಾಸವಿದ್ದ 25 ವರ್ಷದ ನವವಿವಾಹಿತೆಯೊಬ್ಬಳು ಸೆ.23ರ ಸಂಜೆ ಮನೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಮೃತಪಟ್ಟಿದ್ದಳು. ಕೋಲಾರ ಜಿಲ್ಲೆ ಮುಳಬಾಗಿಲು ಮೂಲದ ಈಕೆಯ ಪತಿ ಯಾದಗಿರಿ ಸಮೀಪದ ಸರ್ಕಾರಿ ಶಾಲೆಯೊಂದರಲ್ಲಿ ಶಿಕ್ಷಕರೆಂದು ಕಾರ್ಯನಿರ್ವಹಿಸುತ್ತಿದ್ದಾರೆ.
ಪತಿಯ ನಡವಳಿಕೆಯ ಬಗ್ಗೆಯೂ ಅನುಮಾನ ವ್ಯಕ್ತಪಡಿಸಿದ್ದ ಆ ಸಂಬಂಧಿಕರು, ತಮ್ಮ ಮಗುವಿಗೆ ಕಿರುಕುಳ ನೀಡಿ ಕೊಲೆ ಮಾಡಲಾಗಿದೆ. ಸರ್ಕಾರಿ ನೌಕರನೆಂಬ ಕಾರಣಕ್ಕೆ ಅದ್ಧೂರಿ ಮದುವೆ ಮಾಡಿದ್ದೆವು, ಮುಗ್ಧ ಜೀವ ಬಲಿಯಾಯ್ತು ಎಂದೆಲ್ಲಾ ಆರೋಪಿಸಿದ್ದರು.
ಆದರೆ, ಬೆಳಿಗ್ಗೆಯಿಂದ ನಡೆದಿದ್ದ ಈ ಬೆಳವಣಿಗೆಗಳು ಸಂಜೆಯ ವೇಳೆ ಕರಗತೊಡ ಗಿದ್ದವು. ಶಿಕ್ಷಕ ಪತಿ ವಿರುದ್ಧ ದೂರು ನೀಡದಂತೆ, ಇದೊಂದು ಸಹಜ ಆತ್ಮಹತ್ಯೆ ಎಂಬಂತೆ ದೂರು ದಾಖಲಿಸುವಂತೆ ಪಾಲಕರಿಗೆ ಒತ್ತಡ ಹೇರುತ್ತಿದ್ದ ಕೆಲವರು, ಮನವೊಲೈಕೆಗೆ ಯತ್ನಿಸುತ್ತಿರುವುದು ಕಂಡುಬಂದಿತ್ತು.
ಶಿಕ್ಷಕರ ಸಂಘದ ಕೆಲವು ಮುಖಂಡರು, ರಾಜಕೀಯ ಪ್ರಭಾವಿಗಳು ಪಾಲಕರ ಜೊತೆಗೆ ಮಾತು ಕತೆಗೆ ನಿಂತಂತಿತ್ತು. ಸುಮಾರು 10 ರಿಂದ 12 ಲಕ್ಷ ರು.ಗಳ ಹಣದ ಮಾತುಕತೆ ನಡೆದು, ಪತಿಯ ವಿರುದ್ಧ ಮುಂದಿನ ದಿನಗಳಲ್ಲಿ ದೂರು ನೀಡುವುದಿಲ್ಲ ಎಂಬುದಾಗಿ ಬಾಂಡ್ ಪೇಪರಿನಲ್ಲಿ ಬರೆಯಿಸಿಕೊಂಡ ಒಪ್ಪಂದ ನಡೆದು, ಕೊನೆಗೆ ನಗರ ಠಾಣೆಯಲ್ಲಿ ಆತ್ಮಹತ್ಯೆ ದೂರು ದಾಖಲಿಸಲಾಯಿತು ಎಂಬ ಮಾತುಗಳು ಸಾರ್ವಜನಿಕರ ಹಾಗೂ ಶಿಕ್ಷಕರ ವಲಯದಲ್ಲಿ ಕೇಳಿಬಂದಿದ್ದವು.