Publish Date: Sat, 29 Nov 2025 (08:42 IST)
Updated Date: Sat, 29 Nov 2025 (08:47 IST)
ಬೆಂಗಳೂರು: ರಾಜ್ಯದಲ್ಲಿ ಅಧಿಕಾರ ಹಂಚಿಕೆ ಹೊಂದಾಣಿಕೆ ಫೈಟ್ ನಡೆಯುತ್ತಿದೆ. ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ನಡುವೆ ಸಿಎಂ ಆಗಿ ಯಾರು ಮುಂದುವರಿಯಬೇಕು ಎಂದು ತಿರ್ಮಾನಿಸುವವರು ರಾಹುಲ್ ಗಾಂಧಿ ಅಲ್ಲ, ಹಾಗಿದ್ದರೆ ಅವರು ಯಾರು ನೋಡಿ.
ರಾಜ್ಯ ನಾಯಕರೊಂದಿಗೆ ಸಭೆ ನಡೆಸಿದ್ದ ಮಲ್ಲಿಕಾರ್ಜುನ ಖರ್ಗೆ ಹೈಕಮಾಂಡ್ ಎಲ್ಲವನ್ನೂ ನಿರ್ಧರಿಸುತ್ತದೆ ಎಂದಿದ್ದರು. ಆಗ ರಾಹುಲ್ ಗಾಂಧಿ ಕೈಯಲ್ಲಿ ಎಲ್ಲಾ ತೀರ್ಮಾನವಿದೆ ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ ಕೇವಲ ರಾಹುಲ್ ಗಾಂಧಿ ಅಲ್ಲ, ಮತ್ತೊಬ್ಬ ನಾಯಕರು ಇದನ್ನು ತೀರ್ಮಾನಿಸಲಿದ್ದಾರೆ.
ರಾಜ್ಯದ ಸಿಎಂ ಕುರ್ಚಿ ಕದನದ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳುವವರು ಸೋನಿಯಾ ಗಾಂಧಿ ಎನ್ನಲಾಗಿದೆ. ಸೋನಿಯಾ ಗಾಂಧಿ ವಿದೇಶ ಪ್ರವಾಸದಲ್ಲಿದ್ದರು. ಈಗಷ್ಟೇ ಅವರು ದೇಶಕ್ಕೆ ವಾಪಸ್ ಆಗಿದ್ದಾರೆ. ಹೀಗಾಗಿ ಅವರೇ ಅಂತಿಮ ನಿರ್ಧಾರ ಕೈಗೊಳ್ಳಬೇಕಿದೆ.
ಅದಕ್ಕಾಗಿಯೇ ಹೈಕಮಾಂಡ್ ತೀರ್ಮಾನ ವಿಳಂಬವಾಗುತ್ತಿದೆ ಎಂದು ಹೇಳಲಾಗುತ್ತಿದೆ. ನಿನ್ನೆ ಮತ್ತು ಮೊನ್ನೆ ಎರಡೂ ದಿನ ಹೈಕಮಾಂಡ್ ನಾಯಕರ ಸಭೆ ನಡೆದಿದ್ದರೂ ರಾಜ್ಯದ ಕುರ್ಚಿ ಕದನ ಇನ್ನೂ ತೀರ್ಮಾನವಾಗಿಲ್ಲ. ಇದಕ್ಕೆ ಸೋನಿಯಾ ದೇಶದಲ್ಲಿ ಇಲ್ಲದೇ ಇರುವುದು ಕಾರಣ ಎನ್ನಲಾಗುತ್ತಿದೆ. ಹೀಗಾಗಿ ಅವರು ಈ ವಿಚಾರದಲ್ಲಿ ಏನು ತೀರ್ಮಾನ ತೆಗೆದುಕೊಳ್ಳುತ್ತಾರೋ ಅದೇ ಅಂತಿಮವಾಗಲಿದೆ.