Publish Date: Fri, 27 Jun 2025 (09:21 IST)
Updated Date: Fri, 27 Jun 2025 (09:24 IST)
ಬೆಂಗಳೂರು: ಕರ್ನಾಟಕ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಬಿವೈ ವಿಜಯೇಂದ್ರ ಮರು ಆಯ್ಕೆಯಾಗಲ್ಲ. ಬದಲಾಗಿ ಹೈಕಮಾಂಡ್ ಕೊನೆಯ ಕ್ಷಣದಲ್ಲಿ ಟ್ವಿಸ್ಟ್ ನೀಡಲಿದೆ ಎಂಬ ಸುದ್ದಿಗಳು ಕೇಳಿಬರುತ್ತಿದೆ.
ಕರ್ನಾಟಕ ಮಾತ್ರವಲ್ಲದೆ ಬೇರೆ ರಾಜ್ಯಗಳ ಪಕ್ಷದ ಅಧ್ಯಕ್ಷ ಸ್ಥಾನಗಳನ್ನೂ ಬಿಜೆಪಿ ಹೈಕಮಾಂಡ್ ಶೀಘ್ರದಲ್ಲೇ ತೀರ್ಮಾನಿಸಲಿದೆ. ಮುಂದಿನ ವಾರದಲ್ಲಿ ಬಿಜೆಪಿಗೆ ಹೊಸ ನಾಯಕ ಯಾರು ಎಂದು ತಿಳಿಯಲಿದೆ. ಮೂಲಗಳ ಪ್ರಕಾರ ವಿಜಯೇಂದ್ರ ಬದಲಿಗೆ ಅಚ್ಚರಿಯ ಅಭ್ಯರ್ಥಿಯೊಬ್ಬರನ್ನು ಘೋಷಿಸಿದರೂ ಅಚ್ಚರಿಯಿಲ್ಲ ಎನ್ನಲಾಗುತ್ತಿದೆ.
ಈ ಮೊದಲು ವಿ ಸೋಮಣ್ಣ ಹೆಸರು ಬಲವಾಗಿ ಕೇಳಿಬರುತ್ತಿತ್ತು. ಆದರೆ ಸೋಮಣ್ಣ ಈಗಾಗಲೇ ಕೇಂದ್ರ ಸಚಿವರೂ ಆಗಿರುವುದರಿಂದ ಆ ಸ್ಥಾನವನ್ನೇ ನಿಭಾಯಿಸುವಂತೆ ಹೈಕಮಾಂಡ್ ಸಲಹೆ ನೀಡಿದೆ. ಉಳಿದಂತೆ ಆರ್ ಅಶೋಕ್ ಕೂಡಾ ಈಗ ರೇಸ್ ನಲ್ಲಿದ್ದಾರೆ. ಸದ್ಯಕ್ಕೆ ದೆಹಲಿಯಲ್ಲೇ ಬೀಡುಬಿಟ್ಟಿದ್ದು ಹೈಕಮಾಂಡ್ ಜೊತೆ ನಿರಂತರ ಮಾತುಕತೆಯಲ್ಲಿದ್ದಾರೆ.
ಇನ್ನೊಂದೆಡೆ ವಿಜಯೇಂದ್ರ ವಿರೋಧಿ ಬಣವೂ ದೆಹಲಿಯಲ್ಲಿ ಬೀಡುಬಿಟ್ಟಿದೆ. ಬಿವೈ ವಿಜಯೇಂದ್ರರನ್ನು ಬದಲಾಯಿಸಬೇಕು ಎಂದು ವಿರೋಧಿ ಬಣ ಒತ್ತಡ ಹಾಕುತ್ತಿದೆ. ಹೀಗಾಗಿ ವಿಜಯೇಂದ್ರ ಬದಲಾಗಿ ಅರವಿಂದ್ ಬೆಲ್ಲದ್, ವಿ ಸುನಿಲ್ ಕುಮಾರ್ ಕೂಡಾ ರೇಸ್ ನಲ್ಲಿದ್ದಾರೆ. ಒಂದು ವೇಳೆ ವಿಜಯೇಂದ್ರಗೆ ರಾಜ್ಯಾಧ್ಯಕ್ಷ ಪಟ್ಟ ಕೈ ತಪ್ಪಿದರೆ ಅವರಿಗೆ ಬೇರೊಂದು ಉತ್ತಮ ಹುದ್ದೆಯನ್ನೇ ನೀಡಬಹುದು. ಇಲ್ಲದೇ ಹೋದರೆ ಬಿಜೆಪಿಯಲ್ಲಿ ಮತ್ತೊಂದು ಅಸಮಾಧಾನಿತರ ಗುಂಪು ಸೃಷ್ಟಿಯಾಗಲಿದೆ. ಇದೆಲ್ಲದರ ಜೊತೆಗೆ ಈಗ ಬಿಎಸ್ ಯಡಿಯೂರಪ್ಪ ಮತ್ತೆ ಪಕ್ಷದಲ್ಲಿ ಸಕ್ರಿಯರಾಗಿರುವುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.