Publish Date: Sat, 07 Sep 2019 (16:31 IST)
Updated Date: Sat, 07 Sep 2019 (16:33 IST)
ಪವಿತ್ರವಾಗಿರೋ ತ್ರಿವೇಣಿ ಸಂಗಮ ಕ್ಷೇತ್ರ ಆ ಕೆಲಸದಿಂದ ವಂಚಿತವಾಗಿದೆ ಎಂಬ ದೂರು ಕೇಳಿಬರುತ್ತಿದೆ.
ಅಭಿವೃದ್ಧಿ ಕೆಲಸ ಕಾರ್ಯಗಳಿಂದ ಅಂಬಿಗರಹಳ್ಳಿ, ಪುರ ಮತ್ತು ಸಂಗಾಪುರ ಗ್ರಾಮಗಳ ಸಮೀಪದಲ್ಲಿರುವ ಪವಿತ್ರ ತ್ರಿವೇಣಿ ಸಂಗಮ ಕ್ಷೇತ್ರ ವಂಚಿತವಾಗಿದೆ.
ಕಾವೇರಿ, ಹೇಮಾವತಿ, ಲಕ್ಷ್ಮಣತೀರ್ಥ ನದಿಗಳು ಒಂದೆಡೆ ಸೇರುವ ಪವಿತ್ರ ಸಂಗಮ ಕ್ಷೇತ್ರವು ಕೃಷ್ಣರಾಜಪೇಟೆ ತಾಲ್ಲೂಕು ಕೇಂದ್ರದಿಂದ ಕೇವಲ 25 ಕಿ.ಮೀ ದೂರದಲ್ಲಿದೆ. ಈ ಕ್ಷೇತ್ರ ಅಭಿವೃದ್ಧಿ ಕೆಲಸ ಕಾರ್ಯಗಳಿಂದ ವಂಚಿತವಾಗಿದ್ದು, ಪವಿತ್ರ ತ್ರಿವೇಣಿ ಸಂಗಮ ಕ್ಷೇತ್ರವು ಪ್ರಸಿದ್ಧಿಗೆ ಬರದೇ ಜನಮಾನಸದಿಂದ ದೂರವಾಗುತ್ತಿದೆ.
ತ್ರಿವೇಣಿ ಸಂಗಮ ಕ್ಷೇತ್ರದ ಅಭಿವೃದ್ಧಿಗೆ ರಾಜ್ಯ ಸರ್ಕಾರವು ಮುಂದಾಗಬೇಕು. ನಾಡಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ವಿಶೇಷ ಅನುದಾನ ಬಿಡುಗಡೆ ಮಾಡಿ
ಪವಿತ್ರ ತ್ರಿವೇಣಿ ಸಂಗಮ ಕ್ಷೇತ್ರವನ್ನು ಅಭಿವೃದ್ಧಿಪಡಿಸುವ ಇಚ್ಛಾಶಕ್ತಿಯನ್ನು ಪ್ರದರ್ಶಿಸಬೇಕು ಎಂದು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಡಾ.ಅಂ.ಚಿ.ಸಣ್ಣಸ್ವಾಮಿಗೌಡ ಒತ್ತಾಯಿಸಿದ್ದಾರೆ.
ಮಲೈಮಹದೇಶ್ವರರು ಬಾಲಕರಾಗಿದ್ದಾಗ ಪವಾಡ ಮಾಡಿರುವ ಕ್ಷೇತ್ರವಾದ ತ್ರಿವೇಣಿ ಸಂಗಮವು ಕಾವೇರಿ ನದಿಯನ್ನು ದಾಟಲು ಬಾಲಕ ಮಹದೇಶ್ವರರು ಹರಿಗೋಲಿನ ವೆಚ್ಚವಾಗಿ ಹಣ ಕೇಳಿದಾಗ ಅಂಬಿಗರಿಗೆ ಶಾಪ ನೀಡಿ ತಾವು ಧರಿಸಿರುವ ವಸ್ತ್ರವನ್ನೇ ನದಿಯ ನೀರಿನ ಮೇಲೆ ಹಾಸಿ ತೆಪ್ಪವನ್ನಾಗಿ ಮಾಡಿಕೊಂಡು ನದಿ ದಾಟಿ ಕಪ್ಪಡಿ ಕ್ಷೇತ್ರಕ್ಕೆ ಹೋದ ಇತಿಹಾಸವಿದೆ.