Publish Date: Sat, 22 Apr 2017 (18:20 IST)
Updated Date: Sat, 22 Apr 2017 (18:26 IST)
ರೌಡಿ ನಾಗ ಮಾಧ್ಯಮಗಳಿಗೆ ಹೇಳಿಕೆ ಕುರಿತಂತೆ ಗೃಹ ಸಚಿವ ಜಿ. ಪರಮೇಶ್ವರ್ ಅವರು, ಪೊಲೀಸ್ ಆಯುಕ್ತ ಪ್ರವೀಣ್ ಸೂದ್ ಅವರ ಜೊತೆ ಮಾತುಕತೆ ನಡೆಸಿದ್ದಾರೆ. ರೌಡಿ ಶೀಟರ್ ನಾಗನ ಬಂಧನ ಕಾರ್ಯಾಚರಣೆ ಬಗ್ಗೆಯೂ ಚರ್ಚೆ ನಡೆದಿದೆ ಎನ್ನಲಾಗಿದೆ.
ಮಾತುಕತೆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಪರಮೇಶ್ವರ್, ನಾಗನ ಹೇಳಿಕೆಗಳನ್ನ ಗಂಭೀರವಾಗಿ ಪರಿಗಣಿಸುವುದಾಗಿ ಹೇಳಿದ್ದಾರೆ. ಮೊದಲು ನಾಗ ಸಿಗಬೇಕು, ಹೇಳಿಕೆಗಳನ್ನ ದಾಖಲಿಸಬೇಕು. ಆಮೇಲೆ ಯಾರ್ಯಾರು ಶಾಮೀಲಾಗಿದ್ದಾರೆ ಎಂಬುದು ಹೊರ ಬರಲಿದೆ. ಐಪಿಎಸ್ ಅಧಿಕಾರಿಗಳ ಮೇಲಿನ ಅರೋಪ ಕುರಿತಂತೆಯೂ ಗಂಭೀರವಾಗಿ ತನಿಖೆ ನಡೆಸುತ್ತೇವೆ ಎಂದು ಪರಮೇಶ್ವರ್ ಹೇಳಿದ್ದಾರೆ.
ತನ್ನ ಮೇಲೆ ಪೊಲೀಸರು ದಾಳಿ ನಡೆಸಿ 14.9 ಕೋಟಿ ರೂಪಾಯಿ ವಶಪಡಿಸಿಕೊಂಡ ಬಳಿಕ ರೌಡಿ ನಾಗ ತಲೆಮರೆಸಿಕೊಂಡಿದ್ದು, ಇದುವರೆಗೂ ಪೊಲೀಸರ ಕೈಗೆ ಸಿಕ್ಕಿಲ್ಲ. ಈ ಮಧ್ಯೆ, ಮಾಧ್ಯಮಗಳಿಗೆ ವಿಡಿಯೋ ಮೂಲಕ ಹೇಳಿಕೆ ನೀಡಿರುವ ನಾಗ ನನ್ನ ಮನೆಯಲ್ಲಿದ್ದ ಹಣ ಐಪಿಎಸ್ ಅಧಿಕರಿಗಳು ಮತ್ತು ಸಿಎಂ ಆಪ್ತರೊಬ್ಬರಿಗೆ ಸೇರಿದ್ದು ಎಂದು ಹೇಳಿ ಹೊಸ ಬಾಂಬ್ ಸಿಡಿಸಿದ್ದಾರೆ. ಅಷ್ಟೇ ಅಲ್ಲ, ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ಪಿ.ಸಿ. ಮೋಹನ್ ವಿರುದ್ಧವೂ ನಾಗ ಅರೋಪಗಳನ್ನ ಮಾಡಿದ್ದಾನೆ.