Publish Date: Sun, 03 Nov 2019 (11:42 IST)
Updated Date: Sun, 03 Nov 2019 (11:46 IST)
ಬೆಂಗಳೂರು : ಅನರ್ಹ ಶಾಸಕರಿಗೆ ಟಿಕೆಟ್ ಕೊಡುತ್ತೇನೆಂದು ನಾನು ಹೇಳಿಲ್ಲ. ಅನರ್ಹ ಶಾಸಕರಿಗೂ ನಮಗೂ ಯಾವುದೇ ಸಂಬಂಧ ಇಲ್ಲ ಎಂದು ಸಿಎಂ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.
ಅನರ್ಹರು ತಮ್ಮದೇ ಕಾರಣಕ್ಕೆ ರಾಜೀನಾಮೆ ಕೊಟ್ಟಿದ್ದಾರೆ. ಮುಂದೇನು ಮಾಡಬೇಕು ಎಂದು ಅವರೇ ತೀರ್ಮಾನಿಸ್ತಾರೆ. ಅನರ್ಹ ಶಾಸಕರಿಗೂ ನಮಗೂ ಯಾವುದೇ ಸಂಬಂಧ ಇಲ್ಲ. ನಾನು ಹೇಳಿರೋದನ್ನು ತಿರುಚಿ ಹೇಳ್ತಿದ್ದಾರೆ. ಅನರ್ಹರು ಬಾಂಬೆಗೆ ಹೋಗಿದ್ದು ದೇಶಕ್ಕೆ ಗೊತ್ತಿರುವ ವಿಚಾರ,ಆ ಮಾತನ್ನೇ ನಾನು ಹೇಳಿದ್ದೇನೆ. ಅದಕ್ಕೂ ಗೃಹಸಚಿವ ಅಮಿತ್ ಶಾಗೂ ಏನು ಸಂಬಂಧ. ಸಿದ್ದರಾಮಯ್ಯ ಆರೋಪಗಳಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ಕಾಂಗ್ರೆಸ್ ನವರೇ ಸಿದ್ದರಾಮಯ್ಯ ನಡವಳಿಕೆ ಇಷ್ಟಪಡಲ್ಲ. ಏನೋ ಒಂದು ಸುಳ್ಳು ಪ್ರಚಾರ ಮಾಡಲು ಕಾಂಗ್ರೆಸ್ ಯತ್ನ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆಡಿಯೋ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿದ ವಿಚಾರದ ಬಗ್ಗೆ ಮಾತನಾಡಿದ ಅವರು, ಕಾಂಗ್ರೆಸ್ ನವರದ್ದು ಹುಚ್ಚುತನದ ಪರಮಾವಧಿ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರು ಪ್ರಚಾರ ಪ್ರಿಯರು. ಸಿದ್ದರಾಮಯ್ಯ ವಕೀಲರಾಗಿ ಹೀಗೆ ಮಾತಾಡೋದು ಸರಿಯಲ್ಲ. ಸಿದ್ದರಾಮಯ್ಯ ಗೆ ಕಾಮನ್ ಸೆನ್ಸ್, ವಾಸ್ತವಿಕ ಪ್ರಜ್ಞೆ ಇಲ್ಲ. ಗೃಹಸಚಿವ ಅಮಿತ್ ಶಾ ರಾಜೀನಾಮೆಗೆ ಒತ್ತಾಯಿಸಿದ್ದಾರೆ. ಸಿದ್ದರಾಮಯ್ಯನವರ ಆಗ್ರಹ ಮೂರ್ಖತನದ ಪರಮಾವಧಿ ಎಂದು ಕಿಡಿಕಾರಿದ್ದಾರೆ.