ಮಂಡ್ಯ ಸರ್ಕಾರಿ ಸ್ವಾಮ್ಯದ ಮೈಷುಗರ್ ಸಕ್ಕರೆ ಕಾರ್ಖಾನೆ ವೆಚ್ಚ ಕಡಿಮೆ ಮಾಡಲು ಅಲ್ಲಿನ ನೌಕರರಿಗೆ ಸ್ವಯಂ ನಿವೃತ್ತಿ ಯೋಜನೆ (ವಿಆರ್ಎಸ್) ಘೋಷಿಸಲಾಗುವುದು. ಈ ಮೂಲಕ ಕಾರ್ಖಾನೆಯ ವೆಚ್ಚವನ್ನು ಕಡಿಮೆಗೊಳಿಸಲು ಚಿಂತನೆ ನಡೆಸಿದೆ ಎಂದು ಸಹಕಾರ ಮತ್ತು ಸಕ್ಕರೆ ಸಚಿವ ಹೆಚ್.ಎಸ್. ಮಹದೇವ ಪ್ರಸಾದ್ ಹೇಳಿದ್ದಾರೆ.
ವಿಧಾನ ಪರಿಷತ್ತಿನಲ್ಲಿ ಶಾಸಕ ಕೆ.ಟಿ. ಶ್ರೀಕಂಠೇಗೌಡ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು ಈ ಮಾಹಿತಿ ನೀಡಿದರು. ಮಂಡ್ಯದ ಮೈ ಷುಗರ್ ಸಕ್ಕರೆ ಕಾರ್ಖಾನೆಯು ಏಷ್ಯಾ ಖಂಡದ ಮೊದಲ ಸಕ್ಕರೆ ಕಾರ್ಖಾನೆಯಾಗಿದೆ. 70 ರಿಂದ 80 ವರ್ಷಗಳ ಸುಧೀರ್ಘ ಇತಿಹಾಸ ಇರುವ ಈ ಕಾರ್ಖಾನೆಯಲ್ಲಿ ಇತ್ತೀಚಿನ ದಿನಗಳಲ್ಲಿ ಎದುರಾದ ನ್ಯೂನ್ಯತೆಗಳಿಂದ ಕಾರ್ಖಾನೆಯ ಮಹತ್ವ ಕಳೆದುಕೊಂಡಿದೆ. ಈ ಕಾರ್ಖಾನೆಯಲ್ಲಿ 477 ಜನ ನೌಕರರಿದ್ದಾರೆ. ಅವರಿಗೆ ವಿಆರ್ಎಸ್ ಮೂಲಕ ಸ್ವಯಂ ನಿವೃತ್ತಿ ನೀಡಿ ಆಡಳಿತ ವೆಚ್ಚ ತಗ್ಗಿಸಲು ಕ್ರಮ ವಹಿಸಲಾಗಿದೆ.
ಈ ಸರ್ಕಾರ ಬರುವ ಮುಂಚೆ ಬಿ.ಎಫ್.ಆರ್. ಎದುರು ಈ ಕಾರ್ಖಾನೆಯನ್ನು ರೋಗಗ್ರಸ್ಥ ಕಾರ್ಖಾನೆಯೆಂದು ಘೋಷಿಸಲಾಗಿದೆ. ಈ ಕಂಪನಿಯ ಪುನರುಜ್ಜೀವನಕ್ಕಾಗಿ 2015-16ನೇ ಸಾಲಿನ ಆಯವ್ಯಯದಲ್ಲಿ 120 ಕೋಟಿ ರೂ.ಗಳ ಅನುದಾನ ಕಲ್ಪಿಸಲಾಗಿದೆ. 95 ಕೋಟಿ.ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಬ್ಯಾಂಕ್ಗಳ ಬಾಕಿ ಸಾಲ ತೀರುವಳಿಗಾಗಿ 35.31 ಕೋಟಿ ಶಾಸನಬದ್ಧ ಬಾಕಿ ತೀರುವಳಿಗಾಗಿ 39.98 ಕೋಟಿ ಬಂಡವಾಳ ವೆಚ್ಚಕ್ಕಾಗಿ 20 ಕೋಟಿ ರೂ.ಗಳನ್ನು ಬಳಸಲಾಗಿದೆ.
ಪ್ರಸ್ತುತ ಬಾಯ್ಲರ್ಗಳ ದುರಸ್ತಿ ಕಾರ್ಯಕ್ಕೆ ಮತ್ತು ಇತರೆ ಯಂತ್ರೋಪಕರಣಗಳ ದುರಸ್ತಿಗೆ ದುಡಿಯುವ ಬಂಡವಾಳವಾಗಿ 27 ಕೋಟಿ. ರೂ.ಗಳ ಮೃದುಸಾಲ ಆರ್ಥಿಕ ನೆರವು ನೀಡಲು ಉದ್ದೇಶಿಸಲಾಗಿದೆ. ಅದರಲ್ಲಿ 15 ಕೋಟಿ ರೂ.ಗಳನ್ನು ಈಗಾಗಲೇ ಒದಗಿಸಲಾಗಿದೆ. ಈ ಭಾಗದಲ್ಲಿ ಕಬ್ಬು ಬೆಳೆದ ರೈತರ ಕಬ್ಬನ್ನು ಖಾಸಗಿ ಕಾರ್ಖಾನೆಗಳಿಗೆ ಮತ್ತು ಬೆಲ್ಲದ ಆಲೆ ಮನೆಗಳಿಗೆ ಸರಬರಾಜು ಮಾಡಲಾಗಿದೆ.
ಮೈ ಷುಗರ್ ಕಂಪನಿಯ ಐ.ಟಿ.ಐ ಮತ್ತು ಪ್ರೌಢಶಾಲೆಗಳನ್ನು ಅನುದಾನಿತ ಸಂಸ್ಥೆಗಳನ್ನಾಗಿಸಲಾಗಿದೆ. ಪದವಿಪೂರ್ವ ಕಾಲೇಜ್ ಇನ್ನೂ ಅನುದಾನ ಪಡೆದಿಲ್ಲ. ನೌಕರರಿಗೆ 3 ತಿಂಗಳ ವೇತನ ಬಿಡುಗಡೆ ಮಾಡಲಾಗಿದೆ. ಉಳಿದ ವೇತನವನ್ನು ಮಂಜೂರು ಮಾಡಲಾಗುವುದು ಎಂದರು.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.