Publish Date: Wed, 25 Jan 2023 (09:52 IST)
Updated Date: Wed, 25 Jan 2023 (09:51 IST)
ಬೆಂಗಳೂರು : ಆಧುನಿಕ ಯುಗದಲ್ಲಿ ತಂತ್ರಜ್ಞಾನ ಮುಂದುವರಿದಂತೆ, ವರದಿಯನ್ನು ಮುಟ್ಟಿಸುವಲ್ಲಿ ವೇಗ ಕಂಡಿದ್ದು, ಅದರಂತೆ ಪತ್ರಿಕಾ ರಂಗದಲ್ಲಿ ಪತ್ರಕರ್ತರು ತಮ್ಮ ವೃತ್ತಿ ಕೌಶಲ್ಯವನ್ನು ಹೆಚ್ಚಿಸಿಕೊಳ್ಳಬೇಕೆಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದರು.
ಇಂದು ಕಬ್ಬನ್ ಪಾರ್ಕ್ ಪ್ರೆಸ್ ಕ್ಲಬ್ನಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿ ಹಮ್ಮಿಕೊಂಡಿದ್ದ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆಯಡಿ ಪ್ರಕರ್ತರಿಗೆ ಟ್ಯಾಬ್ ವಿತರಣೆ ಸಮಾರಂಭದ ಉದ್ಘಾಟನೆ ನೆರವೇರಿಸಿ 16 ಪತ್ರಕರ್ತರಿಗೆ ಟ್ಯಾಬ್ಗಳನ್ನು ವಿತರಣೆ ಮಾಡಿ ಮಾತನಾಡಿದ ಸಚಿವರು, ಮಾಧ್ಯಮದಲ್ಲಿ ಕೆಲಸ ಮಾಡುವವರಿಗೂ ಸವಲತ್ತುಗಳ ಅವಶ್ಯಕತೆ ಇದೆ ಎಂದರು.
ಟ್ಯಾಬ್ ವಿತರಿಸುವುದರ ಜೊತೆಗೆ ಅದನ್ನು ಉಪಯೋಗಿಸುವ ವಿಧಾನ, ಅದರ ವಿಶೇಷತೆ ಮತ್ತು ಅನುಕೂಲದ ಕುರಿತು ತರಬೇತಿ ನೀಡುವ ಅವಶ್ಯಕತೆ ಇದೆ. ಎಲೆಕ್ಟ್ರಾನಿಕ್ ಮಾಧ್ಯಮಕ್ಕೂ, ಮುದ್ರಣ ಮಾಧ್ಯಮಕ್ಕೂ ಬಹಳಷ್ಟು ವ್ಯತ್ಯಾಸವಿದೆ.
ಎಲೆಕ್ಟ್ರಾನಿಕ್ ಮಾಧ್ಯಮವು ಬ್ರೇಕಿಂಗ್ ನ್ಯೂಸ್ ನೀಡುವ ಆತುರದಲ್ಲಿ ಸತ್ಯಾಸತ್ಯತೆಯನ್ನು ಪರಿಶೀಲಿಸದೆ ತಕ್ಷಣವೇ ಪ್ರಸಾರ ಮಾಡುತ್ತಿವೆ, ಆದರೆ ಮುದ್ರಣ ಮಾಧ್ಯಮಗಳು ಪರಿಶೀಲಿಸಿ ಸುದ್ದಿ ನೀಡುತ್ತಾರೆ ಎಂದರು.