Publish Date: Tue, 21 May 2024 (11:16 IST)
Updated Date: Tue, 21 May 2024 (11:25 IST)
ಬೆಂಗಳೂರು: ಮಳೆಯ ಕೊರತೆಯಿಂದಾಗಿ ರಾಜ್ಯದಲ್ಲಿ ತರಕಾರಿ ಬೆಲೆ ಗಗನಕ್ಕೇರಿದೆ. ಅದರಲ್ಲೂ ಬೀನ್ಸ್ ಬೆಲೆ ಕೇಳಿದರೆ ಸದ್ಯಕ್ಕೆ ಮುಟ್ಟೋ ಹಾಗೇ ಇಲ್ಲ. ತರಕಾರಿಗಳ ಸದ್ಯದ ಮಾರುಕಟ್ಟೆ ಬೆಲೆ ಡೀಟೈಲ್ ಇಲ್ಲಿದೆ.
ಬಿರುಬಿಸಿಲಿನಿಂದಾಗಿ ರಾಜ್ಯದಲ್ಲಿ ತರಕಾರಿ ಬೆಳೆ ಕಡಿಮೆಯಾಗಿದೆ. ಬೆಳೆದ ತರಕಾರಿ ಗಿಡಗಳಿಗೆ ನೀರಿಲ್ಲದೇ ಒಣಗಿ ಹೋಗಿವೆ. ಹೀಗಾಗಿ ತರಕಾರಿ ಬೆಲೆ ಕಳೆದ ಮೂರು ವಾರಗಳಿಂದ ವಿಪರೀತ ಹೆಚ್ಚಾಗಿದೆ. ಅದರಲ್ಲೂ ಬೀನ್ಸ್, ಬಟಾಣಿ, ಬೆಳ್ಳುಳ್ಳಿ, ಶುಂಠಿ, ಹಸಿಮೆಣಸಿನಕಾಯಿ ಇತ್ಯಾದಿ ದಿನನಿತ್ಯ ಉಪಯೋಗಿಸುವ ತರಕಾರಿಗಳ ಬೆಲೆ ವಿಪರೀತ ಏರಿಕೆಯಾಗಿದೆ. ಸದ್ಯಕ್ಕೆ ತರಕಾರಿಯೇ ಮಧ್ಯಮ ವರ್ಗದವರಿಗೆ ಹೊರೆಯಾಗಿದೆ.
ಕಳೆದ ಒಂದು ವಾರದಿಂದ ರಾಜ್ಯದ ಹಲವೆಡೆ ಮಳೆಯಾಗಿದೆ. ಆದರೆ ಇದುವರೆಗೆ ತರಕಾರಿ ಬೆಲೆ ಇಳಿದಿಲ್ಲ. ಮುಂದೆ ಎರಡು ವಾರಗಳ ನಂತರ ತರಕಾರಿ ಬೆಲೆ ಇಳಿಯುವ ನಿರೀಕ್ಷೆಯಿದೆ. ಸದ್ಯಕ್ಕೆ ಬೀನ್ಸ್ ಬೆಲೆ 235 ರೂ.ಗೆ ಏರಿಕೆಯಾಗಿದೆ. 140 ರೂ.ಇದ್ದ ಬಟಾಣಿ 190 ರೂ.ಗೆ ಏರಿಕೆಯಾಗಲಿದೆ. 300 ರೂ. ಇದ್ದ ಬೆಳ್ಳುಳ್ಳಿ 318 ರೂ. ತಲುಪಿದೆ. 180 ರೂ. ಇದ್ದ ಶುಂಠಿ 195 ರೂ. ತಲುಪಿದೆ. ಹಸಿಮೆಣಸಿನಕಾಯಿ 110 ರೂ. ತಲುಪಿದೆ.
ಕ್ಯಾರೆಟ್ 80, ನವಿಲುಕೋಸು 60 ಆಲೂಗಡ್ಡೆ 50, ಹಾಗಲಕಾಯಿ 82, ಬದನೆಕಾಯಿ, ಹಾಗಲಕಾಯಿ 70 ರೂ., ಈರುಳ್ಳಿ 42 ರೂ. ಗೆ ತಲುಪಿದೆ. ಸದ್ಯಕ್ಕೆ ಮಧ್ಯಮವರ್ಗದವರಿಗೆ ತರಕಾರಿ ಖರೀದಿ ಮಾಡುವುದೇ ಹೊಡೆಯಾಗಿದೆ. ಬೆಲೆ ಕೇಳಿ ತರಕಾರಿ ಖರೀದಿ ಮಾಡಲು ಹಿಂದೇಟು ಹಾಕುತ್ತಿದ್ದಾರೆ.