Publish Date: Thu, 11 Jul 2024 (14:55 IST)
Updated Date: Thu, 11 Jul 2024 (14:58 IST)
ಶಿರಸಿ: ವಾಲ್ಮೀಕಿ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಹೆಸರು ತಳುಕು ಹಾಕುತ್ತಿದ್ದ ಹಾಗೇ ಸಿದ್ದರಾಮಯ್ಯ ಅವರು ಸಮಾಜವಾದಿ ಅಲ್ಲ ಮಜವಾದಿ ಎಂದು ಸಂಸದ ವಿಶ್ವೇಶ್ವರ ಹೆಗಡೆ ವ್ಯಂಗ್ಯ ಮಾಡಿದ್ದಾರೆ.
ನಗರದ ದೀನದಯಾಳ ಸಭಾಂಗಣದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಾಲ್ಮೀಕಿ ನಿಗಮದಲ್ಲಿ ₹187 ಕೋಟಿ ಹಗರಣ ನಡೆದಿದೆ ಎನ್ನಲಾಗಿದ್ದು, ಸಿದ್ದರಾಮಯ್ಯ ಅವರೇ ಹಣಕಾಸು ಸಚಿವರಾಗಿದ್ದಾರೆ. ಇಷ್ಟು ದೊಡ್ಡ ಮೊತ್ತದ ಹಣ ವರ್ಗಾವಣೆ ಸಿಎಂ ಗಮನಕ್ಕೆ ಬಾರದೆ ಹೇಗೆ ನಡೆಯಿತು. ಆದ್ದರಿಂದ ಈ ಹಗರಣದ ನೇರ ಹೊಣೆಯನ್ನು ಸಿಎಂ ಸಿದ್ದರಾಮಯ್ಯ ಅವರು ವಹಿಸಬೇಕು ಎಂದರು.
ಇನ್ನೂ ಈ ಪ್ರಕರಣದಿಂದ ಪಾರಾಗಲು ಸಿಎಂ ಹಾಗೂ ಸಚಿವ ಭೈರತಿ ಸುರೇಶ್ ಅವರು ಮುಂದಾಗಿದ್ದಾರೆ. ಅಧಿಕಾರಿಗಳ ತಲೆದಂಡದ ಮೂಲಕ ತಾವು ಬಚಾವಾಗಲು ನೋಡುತ್ತಿದ್ದಾರೆ ಎಂದು ಹೇಳಿದರು.
ವಾಲ್ಮೀಕಿ ನಿಗಮದಲ್ಲಿ ನಡೆದ ಭ್ರಷ್ಟಾಚಾರ ಹಗರಣ, ಮುಡಾ ಹಗರಣದಲ್ಲಿ ನೇರ ಪಾತ್ರವಿರುವ ಸಿಎಂ ಸಿದ್ದರಾಮಯ್ಯ ತಕ್ಷಣ ರಾಜೀನಾಮೆ ನೀಡಬೇಕು. ಇವೆರಡೂ ಪ್ರಕರಣ ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿದರು.