Publish Date: Tue, 12 Sep 2017 (14:52 IST)
Updated Date: Tue, 12 Sep 2017 (14:54 IST)
ಬೆಂಗಳೂರು: ಚುನಾವಣೆ ಸಮೀಪಿಸುತ್ತಿದ್ದಂತೆ ವೀರಶೈವ ಲಿಂಗಾಯತರ ಮಧ್ಯೆ ಒಡಕು ಮೂಡಿಸಲು ಸಚಿವ ಎಂ.ಬಿ.ಪಾಟೀಲ್ ಯತ್ನಿಸುತ್ತಿದ್ದಾರೆ. ಅಂತಹ ಪುಣ್ಯಾತ್ಮನಿಗೆ ನೆಮ್ಮದಿ ಸಿಗಂದಂತಾಗಲಿ ಎಂದು ಮಾಜಿ ಸಚಿವ ವಿ.ಸೋಮಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಎಂ.ಬಿ.ಪಾಟೀಲ್ ಸುದ್ದಿಗೋಷ್ಠಿಯಲ್ಲಿ ಸಿದ್ದಗಂಗಾ ಶ್ರೀಗಳ ಹೇಳಿಕೆಯನ್ನು ತಿರುಚಿದ್ದಾರೆ. ಸ್ವಾಮೀಜಿ ಲಿಂಗಾಯತ ಧರ್ಮದ ಪರ ಎಂದಿರುವುದು ಸರಿಯಲ್ಲ. ನೀರಾವರಿ ಸಚಿವರಿಗೆ ಇದು ಶೋಭೆ ತರುವುದಿಲ್ಲ ಎಂದು ಹೇಳಿದ್ದಾರೆ.
ಶ್ರೀಗಳು ಸಮಾಜ ಒಗ್ಗಟ್ಟಿನಿಂದ ಹೋಗಬೇಕೆಂದಿದ್ದಾರೆ. ಸಮಾಜ ಬಾಂಧವರಲ್ಲಿ ನಾನು ವಿನಂತಿ ಮಾಡುತ್ತೇನೆ. ಸಿದ್ದಗಂಗಾ ಶ್ರೀಗಳು ಮಠ ಅಥವಾ ಒಂದು ಸಮಾಜಕ್ಕೆ ಸೀಮಿತವಾಗಿಲ್ಲ. ಎಲ್ಲಾ ವರ್ಗ, ದುರ್ಬಲರಿಗೂ ಆಶ್ರಯದಾತರಾಗಿದ್ದಾರೆ. ಪ್ರತಿ ದಿನ 10 ಸಾವಿರ ಮಕ್ಕಳಿಗೆ ವಿದ್ಯಾದಾನ, ಅನ್ನದಾನ ಮಾಡುತ್ತಿದ್ದಾರೆ. ಅಂತಹ ತಪಸ್ವಿಗಳ ಹೆಸರು ಪದೇ ಪದೇ ಹೇಳುವುದು ಎಷ್ಟರ ಮಟ್ಟಿಗೆ ಸರಿ. ಶ್ರೀಗಳು ತಮ್ಮ ಭಾವನೆಗಳನ್ನು ತಿಳಿಸಿದ್ದಾರೆ. ಎಂ.ಬಿ.ಪಾಟೀಲರು ಆಣೆ ಮಾಡುತ್ತೇನೆ ಎಂದಿದ್ದಾರೆ. ಸಚಿವರಾಗಿ ಮೊದಲು ಆ ಕೆಲಸ ಮಾಡಲಿ. ಮುತ್ಸದ್ದಿಯ ಹೊಟ್ಟೆಯಲ್ಲಿ ಎಂಥವನು ಹುಟ್ಟಿದ್ದಾನೆ ಎಂದು ಕಿಡಿಕಾರಿದ್ದಾರೆ.
2018ರಲ್ಲಿ ಬಿಎಸ್ ವೈ ಸಿಎಂ ಎಂದು ಘೋಷಣೆಯಾದ ಕೂಡಲೇ ಹೊಟ್ಟೆಯುರಿ ಶುರುವಾಗಿದೆ. ನಮ್ಮ ಧರ್ಮ ಕಾಪಾಡಲು ಮಹಾಸಭಾ, ಸ್ವಾಮೀಜಿಗಳು ಇದ್ದಾರೆ. ಹೀಗಿರುವಾಗ ಏಕೆ ಪಾಟೀಲರು ಹೀಗೆ ಮಾತನಾಡುತ್ತಾರೆ. ಸಮಾಜ ಇಬ್ಭಾಗ ಮಾಡುವುದು ಒಳಿತಲ್ಲ ಎಂದಿದ್ದಾರೆ. ಅವರು ಸಮಾಜವನ್ನು ಗೊಂದಲಕ್ಕೀಡು ಮಾಡಿದ್ದಾರೆ. ಅವರನ್ನು ಮಂಪರು ಪರೀಕ್ಷೆಗೊಳಪಡಿಸಬೇಕು. ಸಚಿವರ ಗಾಂಭೀರ್ಯತೆ ಬಿಟ್ಟು ಮಾತಾಡುತ್ತಿದ್ದಾರೆ. ವೀರಶೈವ ಮಹಾಸಭಾ ಎಲ್ಲವನ್ನೂ ನೊಡಿಕೊಳ್ಳಲಿದೆ. ನಮ್ಮ ಸಮಾಜವನ್ನು ಬೀದಿಗೆ ತರೋರಿಗೆ ಬುದ್ಧಿ ಹೇಳಬೇಕು. ಇಂದು ಸಂಜೆ 5 ಕ್ಕೆ ವೀರಶೈವ ಮಹಾಸಭಾದಿಂದ ಶ್ರೀಗಳನ್ನು ಭೇಟಿಯಾಗಿ ಈ ಕುರಿತು ಚರ್ಚಿಸುವುದಾಗಿ ತಿಳಿಸಿದ್ದಾರೆ.
Kusuma
Publish Date: Tue, 12 Sep 2017 (14:52 IST)
Updated Date: Tue, 12 Sep 2017 (14:54 IST)