Publish Date: Tue, 05 Sep 2023 (09:53 IST)
Updated Date: Tue, 05 Sep 2023 (00:10 IST)
ಬೆಂಗಳೂರು : ಸನಾತನ ಧರ್ಮದ ಬಗ್ಗೆ ಮಾತನಾಡಿ ತುಷ್ಟೀಕರಣ ರಾಜಕೀಯ ಮಾಡುವುದು ಐಎನ್ಡಿಐಎ ಒಕ್ಕೂಟದ ಉದ್ದೇಶ ಎಂದು ಮಾಜಿ ಸಿಎಂ ಬೊಮ್ಮಾಯಿ ಉದಯ್ ಸ್ಟಾಲಿನ್ ಮತ್ತು ಇಂಡಿಯಾ ಒಕ್ಕೂಟದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಸನಾತನ ಧರ್ಮದ ಬಗ್ಗೆ ತಮಿಳುನಾಡು ಸಚಿವ ಉದಯ್ ಸ್ಟಾಲಿನ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಉದಯ್ ಸ್ಟಾಲಿನ್ ಹೇಳಿಕೆ ನೋಡಿದ್ದೇನೆ. ಸನಾತನ ಧರ್ಮದ ಬಗ್ಗೆ ಅವರ ಹೇಳಿಕೆ ಅವರ ಮನಸ್ಥಿತಿ ತೋರಿಸುತ್ತದೆ. ಸನಾತನ ಧರ್ಮದ ಬಗ್ಗೆ ಅವರು ಹೀಗೆ ಮಾತಾಡಿದ್ದು ಸರಿಯಲ್ಲ.
ಸನಾತನ ಧರ್ಮ ಸರ್ವ ಜನ ಸುಖಿನೋ ಭವಂತು ಅನ್ನೋ ಮೂಲ ತತ್ವ ಒಳಗೊಂಡಿದೆ. ಸಕಲ ಜೀವಿಗಳಿಗೆ ಒಳ್ಳೆಯದು ಆಗಲಿ ಅನ್ನೋದು ಸನಾತನ ಧರ್ಮದ ಮೂಲ. ಇದನ್ನು ಅವರು ಜಾತಿಗೆ ಹೋಲಿಸಿ, ಸನಾತನ ಧರ್ಮ ಕಿತ್ತು ಹಾಕಬೇಕು ಅಂತ ಹೇಳಿದ್ದಾರೆ. ಇದು ಹಿಟ್ಲರ್ ಮೈಂಡ್ಸೆಟ್ ಎಂದು ಕಿಡಿಕಾರಿದರು.
ಈ ಹೇಳಿಕೆ ಸಂವಿಧಾನ, ಪ್ರಜಾಪ್ರಭುತ್ವ ವಿರೋಧಿ ಹೇಳಿಕೆ. ಪ್ರಜಾಪ್ರಭುತ್ವದಲ್ಲಿ, ಸಂವಿಧಾನ ಪ್ರಕಾರವಾಗಿ ಯಾವುದೇ ಧರ್ಮ ವಿರೋಧ ಮಾಡುವ ಹಾಗೆ ಇಲ್ಲ. ಒಬ್ಬ ಸಚಿವನಾಗಿ ಹೀಗೆ ಮಾತಾಡೋದು ಸರಿಯಲ್ಲ. ಅವರನ್ನು ಕೂಡಲೇ ಸಚಿವ ಸ್ಥಾನದಿಂದ ತೆಗೆದುಹಾಕಬೇಕು ಎಂದು ಬೊಮ್ಮಾಯಿ ಆಗ್ರಹಿಸಿದರು.