Publish Date: Thu, 21 Sep 2017 (18:41 IST)
Updated Date: Thu, 21 Sep 2017 (18:44 IST)
ಹುಬ್ಬಳ್ಳಿ: ಸಮಾಜದ ಸ್ವಾಸ್ಥ್ಯ, ಸಮಾಜ ಘಾತಕ ಚಟುವಟಿಕೆಯಲ್ಲಿ ಭಾಗಿಯಾಗಿ ಶಾಂತಿ ಕದಡುತ್ತಿದ್ದ ಆರೋಪದ ಮೇಲೆ ಇಬ್ಬರು ಕೊಲೆ ಆರೋಪಿಗಳನ್ನು ಗಡಿಪಾರು ಮಾಡಿ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರ್ ಎಂ.ಎನ್.ನಾಗರಾಜ್ ಆದೇಶ ಹೊರಡಿಸಿದ್ದಾರೆ.
ಮುಕ್ತುಂ ಸೊಗಲದ ಹಾಗೂ ಇರ್ಫಾನ್ ಹಂಚಿನಾಳ ಗಡಿಪಾರಾದ ಆರೋಪಿಗಳು. ಇವರು ಸಮಾಜದ ಶಾಂತಿಭಂಗವನ್ನುಂಟು ಮಾಡುವ ಕೆಲಸ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಗಡಿಪಾರಿಗೆ ಆದೇಶ ನೀಡಲಾಗಿದೆ. ಮುಕ್ತುಂ ಸೊಗಲದ್ ಕೊಲೆ ಹಾಗೂ ಅಪ್ರಾಪ್ತೆ ಮೇಲೆ ಅತ್ಯಾಚಾರ ಆರೋಪ ಎದುರಿಸುತ್ತಿದ್ದು, ಸೆ. 14ರಂದು ಜಾಮೀನಿನ ಮೇಲೆ ಹೊರಬಂದಿದ್ದ. ಧಾರವಾಡ ಜೈಲಿನಿಂದ ಹೊರಬರುತ್ತಿದ್ದಂತೆ ಬೆಂಬಲಿಗರೊಂದಿಗೆ ಜೈಲಿನಿಂದ ಮನೆಯವರೆಗೂ ತೆರೆದ ಕಾರಿನಲ್ಲಿ ರೋಡ್ ಶೋ ಮಾಡಿದ್ದ. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು.
ಇನ್ನು ಇರ್ಫಾನ್ ಧಾರವಾಡದಲ್ಲಿ ನಡೆದಿದ್ದ ಎರಡು ಕೊಲೆ ಪ್ರಕರಣಗಳಲ್ಲಿ ಆರೋಪಿಯಾಗಿದ್ದು, ಮತ್ತೆ ಹಲವು ಶಾಂತಿಭಂಗ ಚಟುವಟಿಕೆಯಲ್ಲಿ ಭಾಗಿಯಾಗಿದ್ದ ಆರೋಪವಿದೆ. ಹೀಗಾಗಿ ಈತನನ್ನು ಗಡಿಪಾರು ಮಾಡಿ ಆದೇಶ ನೀಡಿದ್ದಾರೆ. ಪೊಲೀಸ್ ಕಮೀಷನರ್ ಈ ನಡೆಯನ್ನು ನಗರದ ಜನತೆಯಿಂದ ಪ್ರಶಂಸೆ ವ್ಯಕ್ತವಾಗಿದೆ. ಕಾನೂನು ಬಾಹಿರ ಚಟುಚಟಿಕೆಯಲ್ಲಿ ಭಾಗಿಯಾಗಿರುವವರಿಗೆ ಇದೊಂದು ಎಚ್ಚರಿಕೆ ಗಂಟೆಯಾಗಿದೆ.