Select Your Language

Notifications

webdunia
webdunia
webdunia
webdunia

ನಾಳೆ ಕರ್ನಾಟಕ ಬಂದ್: 1300 ಸಂಘಟನೆಗಳು ಕೈ ಜೋಡಿಸಿದರೂ ರಾಯಚೂರಿನಿಂದ ಬೆಂಬಲವಿಲ್ಲ ?!

ಕಳಸಾ-ಬಂಡೂರಿ ಯೋಜನೆ ಜಾರಿಗೆ ಒತ್ತಾಯಿಸಿ ನಾಳೆ ನಡೆಸಲಾಗುತ್ತಿರುವ ಕರ್ನಾಟಕ ಬಂದ್‌ಗೆ 1300ಕ್ಕೂ ಹೆಚ್ಚು ಸಂಘಟನೆಗಳು ಬೆಂಬಲ ನೀಡಿವೆ ಎಂಬುದಾಗಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಅವರು ಇಂದು ಸ್ಪಷ್ಟಪಡಿಸಿದ್ದಾರೆ. 
 
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾಳೆ ರಾಜ್ಯ ಬಂದ್‌ಗೆ ಕರೆ ನೀಡಲಾಗಿದ್ದು, ಬಂದ್‌ಗೆ ಪ್ರಮುಖವಾಗಿ ರಾಜಕೀಯ ಪಕ್ಷಗಳಾದ ಜೆಡಿಎಸ್ ಮತ್ತು ಸಿಪಿಐಎಂ ಪಕ್ಷಗಳು ಬೆಂಬಲ ಸೂಚಿಸಿವೆ. ಇದಲ್ಲದೆ ರಾಜಕೀಯೇತರ ಸಂಘಟನೆಗಳಾದ ಸ್ಯಾಂಡಲ್‌ವುಡ್ ಚಿತ್ರೋದ್ಯಮ, ರಾಜ್ಯ ಕಾರ್ಮಿಕ ಸಂಘಟನೆ, ಕನ್ನಡಪರ ಸಂಘಟನೆಗಳಾದ ಜೈ ಕರ್ನಾಟಕ, ಕರ್ನಾಟಕ ಜನ ಜಾಗೃತಿ ಸೇವೆ, ಕರ್ನಾಟಕ ರಕ್ಷಣಾ ವೇದಿಕೆ, ಕರ್ನಾಟಕ ರಣಧೀರ ಪಡೆಗಳೂ ಸೇರಿದಂತೆ ಸರ್ಕಾರಿ ಸಾರಿಗೆ ಇಲಾಖೆ, ಉತ್ತರ ಕರ್ನಾಟಕ ಕ್ಷೇಮಾಭಿವೃದ್ಧಿ ಸಂಘ, ರಾಜ್ಯ ಆಟೋ ಮತ್ತು ಲಾರಿ ಚಾಲಕ, ಮಾಲೀಕರ ಸಂಘ, ಬೀದಿ ಕಾರ್ಮಿಕರ ಸಂಘ, ಖಾಸಗಿ ಶಾಲೆಗಳ ಒಕ್ಕೂಟ ಹಾಗೂ ಪೆಟ್ರೋಲ್ ಬಂಕ್ ಮಾಲೀಕರು ಸೇರಿದಂತೆ 1300ಕ್ಕೂ ಹೆಚ್ಚು ಸಂಘಟನೆಗಳು ಬೆಂಬಲ ನೀಡಿವೆ ಎಂದರು. 
 
ಇದೇ ವೇಳೆ, ಸರ್ಕಾರಿ ಬಸ್‌ಗಳೂ ಕೂಡ ಸಂಘಟನೆಗೆ ಬೆಂಬಲ ಸೂಚಿಸಿದ್ದು, ನಾಳೆ ಸಂಚಾರ ಸ್ಥಗಿತವಾಗಲಿದೆ. ಈ ಹಿನ್ನೆಲೆಯಲ್ಲಿ ನಾಳೆ ಒಂದು ದಿನ ಸಾರ್ವಜನಿಕರು ಸಹಕರಿಸಬೇಕು. ಅಲ್ಲದೆ ಸಂಚಾರ ಇಲ್ಲ ಎಂಬ ಕಾರಣಕ್ಕೆ ಸರ್ಕಾರಿ ಬಸ್‌‌ಗಳ ಮೇಲೆ ಪ್ರತಾಪ ತೋರಬಾರದು. ಏಕೆಂದರೆ ಅವು ನಮಗೆ ಸೇರಿದ ಬಸ್‌ಗಳು, ನಮ್ಮದೇ ಸಾರ್ವಜನಿಕ ಆಸ್ತಿ. ಈ ಹಿನ್ನೆಲೆಯಲ್ಲಿ ಹಾನಿಗೊಳಪಡಿಸದೆ ಸಹಕರಿಸಿ ಎಂದು ಮನವಿ ಮಾಡಿದರು. 
 
ನಾಳೆ ಬೆಳಗ್ಗೆ 6ರಿಂದ ಸಂಜೆ 6 ಗಂಟೆ ವರೆಗೆ ಬಂದ್‌ಗೆ ಕರೆ ನೀಡಲಾಗಿದ್ದು, ರಾಜ್ಯಾದ್ಯಂತ ಪ್ರತಿಭಟನೆ ನಡೆಯಲಿದೆ. ಅಲ್ಲದೆ ಬೆಳಗ್ಗೆ 10 ಗಂಟೆ ವೇಳೆಗೆ ನಗರದ ಟೌನ್‌ಹಾಲ್ ಸರ್ಕಲ್‌ನಿಂದ ಫ್ರೀಢಂ ಪಾರ್ಕ್ ವರೆಗೆ ಬೃಹತ್ ಮೆರವಣಿಗೆ ಹೊರಡಲಿದ್ದು, ಇದರಲ್ಲಿ ಪ್ರಮುಖ ರಾಜಕೀಯ ವ್ಯಕ್ತಿಗಳು ಹಾಗೂ ಚಿತ್ರೋದ್ಯಮದ ಗಣ್ಯರು ಸೇರಿದಂತೆ ಇನ್ನಿತರರು ಭಾಗಿಯಾಗಲಿದ್ದಾರೆ.   
 
ಇನ್ನು ಐಐಟಿ ಕೇಂದ್ರವನ್ನು ರಾಯಚೂರಿಗೆ ನೀಡದೆ ಹುಬ್ಬಳ್ಳಿಗೆ ನೀಡಲಾಗಿದೆ ಎಂಬ ಕಾರಣದಿಂದ ಕೇವಲ ನೈತಿಕ ಬೆಂಬಲ ನೀಡುತ್ತೇವೆಯೇ ಹೊರತು ಬಂದ್‌ಗೆ ಬೆಂಬಲ ನೀಡುವುದಿಲ್ಲ ಎಂಬುದಾಗಿ ರಾಯಚೂರು ಜಿಲ್ಲಾ ಕನ್ನಡಪರ ಸಂಘಟನೆಗಳು ತಿಳಿಸಿವೆ. ಈ ಹಿನ್ನೆಲೆಯಲ್ಲಿ ನಾಳೆ ಬಂದ್ ಇದ್ದರೂ ಕೂಡ ರಾಯಚೂರು ಜಿಲ್ಲೆಯಲ್ಲಿ ಎಂದಿನಂತೆ ಯಥಾಸ್ಥಿತಿ ಮುಂದುವರಿಯಲಿದೆ ಎಂದು ಹೇಳಲಾಗಿದೆ. 

Share this Story:

Follow Webdunia kannada