Publish Date: Mon, 07 Jan 2019 (14:59 IST)
Updated Date: Mon, 07 Jan 2019 (16:47 IST)
ಅಸಂಘಟಿತ ಸಾರಿಗೆ ಕಾರ್ಮಿಕರಿಗೆ ಸಾಮಾಜಿಕ ಸುರಕ್ಷಾ ಕಾಯ್ದೆಯನ್ನು ಜಾರಿಗೊಳಿಸುವುದು ಸೇರಿ 12 ಬೇಡಿಕೆಗಳ ಈಡೇರಿಕೆಗೆ ಕೇಂದ್ರ ಸರ್ಕಾರವನ್ನು ಆಗ್ರಹಿಸಿ ನಾಳೆಯಿಂದ ಎರಡು ದಿನಗಳ ಕಾಲ ಕರೆ ನೀಡಿರುವ ಮುಷ್ಕರದಿಂದ ರಾಷ್ಟ್ರಾದ್ಯಂತ ಜನಜೀವನ ಅಸ್ತವ್ಯಸ್ಥಗೊಳ್ಳುವ ಸಾಧ್ಯತೆಯಿದೆ.
ಎಐಟಿಯುಸಿ, ಸಿಐಟಿಯು, ಐಎನ್ಟಿಯುಸಿ ಎಲ್ಫಿಎಫ್ ಸೇರಿದಂತೆ ಬಹುತೇಕ ಕಾರ್ಮಿಕ ಸಂಘಟನೆಗಳು, ರೈತ ಸಂಘಟನೆಗಳು ಮುಷ್ಕರಕ್ಕೆ ಬೆಂಬಲ ನೀಡಿ ಪಾಲ್ಗೊಳ್ಳುವುದರಿಂದ ಸರ್ಕಾರಿ ಸಾರಿಗೆ ಬಸ್ಗಳು, ಟ್ಯಾಕ್ಸಿ, ಆಟೋ,ಕ್ಯಾಬ್ಗಳ ಸಂಚಾರ ಬಹುತೇಕ ವಾಹನಗಳ ಸ್ಥಗಿತಗೊಳ್ಳಲಿದ್ದು ಸಾರ್ವಜನಿಕರು ಪರದಾಟುವ ಸ್ಥಿತಿ ನಿರ್ಮಾಣವಾಗಲಿದೆ.
ನಾಳಿನ ಕಾರ್ಮಿಕರ ಮುಷ್ಕರಕ್ಕೆ ಬ್ಯಾಂಕ್ಗಳ ನೌಕರರ ಒಕ್ಕೂಟವೂ ಬೆಂಬಲ ವ್ಯಕ್ತಪಡಿಸಿರುವುದರಿಂದ ಬ್ಯಾಂಕಿಂಗ್ ಸೇವೆಯಲ್ಲಿಯೂ ವ್ಯತ್ಯಯ ಉಂಟಾಗಲಿದೆ. ಅಂಗನವಾಡಿ ನೌಕರರು ಮುಷ್ಕರದಲ್ಲಿ ಭಾಗಿಯಾಗುವುದಾಗಿ ಘೋಷಿಸಿರುವುದರಿಂದ ಅಂಗನವಾಡಿಗಳ ಬಂದ್, ಗಾರ್ಮೆಂಟ್ಸ್ ನೌಕರರು ಮುಷ್ಕರದಲ್ಲಿ ಪಾಲ್ಗೊಳ್ಳುತ್ತಿರು ವುದರಿಂದ ನಾಳೆ ಎಲ್ಲ ಗಾರ್ಮೆಂಟ್ಸ್ ಕಾರ್ಖಾನೆಗಳು ಕಾರ್ಯನಿರ್ವಹಿಸುವ ಸಾಧ್ಯತೆ ಕಡಿಮೆಯಾಗಿದೆ.
ಈ ಬಂದ್ಗೆ ಸರ್ಕಾರಿ ನೌಕರರು ಚಿತ್ರೋದ್ಯಮ, ಬೀದಿ ಬದಿ ವ್ಯಾಪಾರಿಗಳು, ಎಪಿಎಂಸಿ ಕಾರ್ಮಿಕ ಸಂಘಟನೆಗಳು ನೈತಿಕ ಬೆಂಬಲ ಘೋಷಿಸಿವೆ ಬಂದ್ನ್ನು ಶಾಂತಯುತವಾಗಿ ರಾಜ್ಯದ ಎಲ್ಲಾ ಜಿಲ್ಲಾ ತಾಲ್ಲೂಕು ಕೇಂದ್ರದಲ್ಲಿ ನಡೆಸಲಾಗುವುದು ನಗರದಲ್ಲಿ ಸಾವಿರಾರು ಕಾರ್ಮಿಕರು ಬೃಹತ್ ಮೆರವಣಿಗೆ ನಡೆಸಲಾಗುವುದು ಎಂದು ಕಾರ್ಮಿಕ ಸಂಘಟನೆಗಳ ಮುಖಂಡರು ತಿಳಿಸಿದ್ದಾರೆ.
ಕಾರ್ಮಿಕ ಸಂಘಟನೆಗಳು ಪ್ರಭಲವಾಗಿರುವ ಪ್ರದೇಶಗಳು ಆಯಕಟ್ಟಿನ ಸ್ಥಳಗಳು ನಗರ ಪ್ರದೇಶಗಳಲ್ಲಿ ಹೆಚ್ಚಿನ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿ ಬಿಗಿ ಭದ್ರತೆ ಕೈಗೊಳ್ಳಲಾಗುವುದು ಬಸ್ ಸಂಚಾರಕ್ಕೆ ಅಗತ್ಯಬಿದ್ದರೆ ಪೊಲೀಸ್ ಭದ್ರತೆಯನ್ನು ನೀಡಲಾಗುವುದು ಎಂದು ಅವರು ತಿಳಿಸಿದರು.