ಮಂಗಳೂರು: ನಿನ್ನೆ ಮಧ್ಯರಾತ್ರಿಯಿಂದ ದಿಢೀರ ಎಂದು 500, 1000 ರೂ. ನೋಟು ಚಲಾವಣೆ ರದ್ದಾದ ಹಿನ್ನೆಲೆಯಲ್ಲಿ ಮಂಗಳೂರಿನ ವಿವಿಧ ಜ್ಯುವೆಲ್ಲರಿ ಶಾಪ್ಗಳಲ್ಲಿ ಭರ್ಜರಿ ವ್ಯಾಪಾರ ನಡೆಯುತ್ತಿದೆ.
ಈಗಾಗಲೇ ಕೆಲವರು ತಾವು ಸಂಗ್ರಹಿಸ ಇಟ್ಟುಕೊಂಡಿರುವ 500, 1000 ರೂ.ಗಳನ್ನು ಬ್ಯಾಂಕ್ ಗೆ ನೀಡಲು ಕೆಲವು ನಿಯಮಾವಳಿ ಫಾಲೋ ಮಾಡಬೇಕಾಗುತ್ತದೆ ಎಂದು, ನೇರವಾಗಿ ಜ್ಯುವೆಲ್ಲರಿ ಶಾಪ್ ಗೆ ಬಂದು ಬಂಗಾರ ಖರೀದಿಯಲ್ಲಿ ತೊಡಗುತ್ತಿದ್ದಾರೆ. ನೂಕು ನುಗ್ಗಲಿನ ಮಧ್ಯೆ ಗ್ರಾಹಕರು ಬಂಗಾರ ಖರೀದಿಸುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಈ ಮೂಲಕ ಕರಾವಳಿ ಜನತೆ ಹಳೆಯ ನೋಟುಗಳನ್ನು ಖಾಲಿ ಮಾಡುವ ಪ್ರಯತ್ನದಲ್ಲಿ ಮುಂದಾಗುತ್ತಿದ್ದಾರೆ.
ಇಂದು ಬ್ಯಾಂಕ್ ವ್ಯವಹಾರ ಹಾಗೂ ಇಂದು, ನಾಳೆ ಎಟಿಎಂ ಕಾರ್ಯನಿರ್ವಹಿಸದ ಹಿನ್ನೆಲೆಯಲ್ಲಿ ಸಾರ್ವಜನಿಕರು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ಕೆಲವು ಎಟಿಎಂ ಕೇಂದ್ರದಲ್ಲಿ ಮನಿ ನೋ ಸ್ಟಾಕ್ ಎಂದು ನಾಮ ಫಲಕ ಡಿಸ್'ಪ್ಲೇ ಮಾಡಲಾಗಿದ್ದರೆ, ಇನ್ನು ಕೆಲವು ಎಟಿಎಂ ಕೇಂದ್ರದ ಎದುರು ಸಾರ್ವಜನಿಕರು ಸಾಲುಗಟ್ಟಿ ನಿಂತಿರುವ ದೃಶ್ಯಗಳು ಕಂಡು ಬರುತ್ತಿವೆ.
ಜ್ಯುವೆಲ್ಲರಿ ಅಂಗಡಿಯ ಜೊತೆಗೆ ಪ್ರತಿಯೊಂದು ಅಂಗಡಿಯ ಎದುರು ಸಾರ್ವಜನಿಕರ ವ್ಯಾಪಾರ ಬಿರುಸಾಗಿ ನಡೆಯುತ್ತಿದೆ. ಹೇಗಾದರೂ ಮಾಡಿ ತಮ್ಮಲ್ಲಿರುವ ಹಳೇ ನೋಟುಗಳನ್ನು ವರ್ಗಾವಣೆ ಮಾಡಲೇಬೇಕೆಂದು ಅಗತ್ಯವಿಲ್ಲದಿದ್ದರೂ ಕೆಲವಷ್ಟು ಸಾಮಗ್ರಿಗಳನ್ನು ಖರೀದಿಸುತ್ತಿದ್ದಾರೆ. ಕೆಲವು ಅಂಗಡಿಕಾರರು ಹಳೆ ನೋಟುಗಳನ್ನು ಪಡೆಯಲು ಹಿಂದೇಟು ಹಾಕುತ್ತಿರುವುದು ಸಹ ಸಾಮಾನ್ಯವಾಗಿದೆ. ಹಾಗೆ, ಹಣವನ್ನು ಬದಲಾಯಿಸಿಕೊಳ್ಳಲು ಪೆಟ್ರೊಲ್ ಬಂಕ್'ಗಳಿಗೂ ಜನರು ಹರಿದು ಬರುತ್ತಿದ್ದಾರೆ.