Publish Date: Tue, 24 Oct 2017 (16:07 IST)
Updated Date: Tue, 24 Oct 2017 (16:11 IST)
ಬೆಂಗಳೂರು: ರಾಜ್ಯದಲ್ಲಿ ಟಿಪಪ್ಉ ಜಯಂತಿ ಆಚರಣೆಗೆ ವ್ಯಾಪಕ ವಿರೋಧ ವ್ಯಕ್ತವಾಗಿದ್ದು, ಈ ವಿಚಾರ ಗದ್ದಲ ಎಬ್ಬಿಸುತ್ತಿದೆ. ಟಿಪ್ಪು ಜಯಂತಿ ವಿರೋಧಿಸುತ್ತಿರುವ ಬಿಜೆಪಿ ನಾಯಕರಾದ ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಅಶೋಕ್ ಮೊದಲಾದವರು ಈ ಹಿಂದೆ ಟಿಪ್ಪು ವೇಷಧಾರಿಗಳಾಗಿ ಜಯಂತಿ ಆಚರಣೆ ಮಾಡಿದ್ದು ಏನೆ ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ಮಾತನಾಡಿದ ಅವರು, ವಿಧಾನಸಭೆ ಚುನಾವಣೆ ಸಮೀಪಿಸುತ್ತಿದೆ ಎಂಬ ಕಾರಣಕ್ಕೆ ಟಿಪ್ಪು ಜಯಂತಿ ವಿರೋಧ ಮಾಡುತ್ತಿರುವ ಬಿಜೆಪಿಯವರದ್ದು ಎರಡು ನಾಲಿಗೆ ಅಲ್ಲವೇ? ಜನ ಇದನ್ನು ಅರ್ಥ ಮಾಡಿಕೊಳ್ಳುವುದಿಲ್ಲವೇ ಎಂದರು.
ಯಡಿಯೂರಪ್ಪ ಈ ಹಿಂದೆ ಟಿಪ್ಪು ವೇಷಧಾರಿಯಾಗಿ ಖಡ್ಗ ಹಿಡಿದು ಅಲ್ಲಾಹನ ಮೇಲಾಣೆ ನಾನು ಮತ್ತೆ ಬಿಜೆಪಿ ಸೇರುವುದಿಲ್ಲ ಎಂದು ಕೂಗಿದ್ದೇ ಕೂಗಿದ್ದು. ಇಂತಹ ರಾಜಕೀಯ ಇಬ್ಬಂದಿತನ ಜನರಿಗೂ ಗೊತ್ತಾಗುತ್ತದೆ. ಆಗೊಂದು, ಈಗೊಂದು ನಾಟಕವಾಡುವ ಯಡಿಯೂರಪ್ಪ ಅವರ ಮಾತಿಗೆ ಏನಾದರೂ ಕಿಮ್ಮತ್ತು ಇದೆಯೇ ಎಂದರು.
ಸಿಎಂ ಆಗಿ ಜಗದೀಶ್ ಶೆಟ್ಟರ್, ಉಪ ಮುಖ್ಯಮಂತ್ರಿಯಾಗಿ ಅಶೋಕ್ ಟಿಪ್ಪು ವೇಷಧಾರಿಗಳಾಗಿಯೇ ಜಯಂತಿ ಆಚರಿಸಿದ್ದರು. ಟಿಪ್ಪು ಕುರಿತಾದ ಪುಸ್ತಕಕ್ಕೆ ಮುನ್ನುಡಿ ಬರೆದು ಶೆಟ್ಟರ್ ಅವರು ಟಿಪ್ಪುವನ್ನು ಹಾಡಿಹೊಗಳಿದ್ದಾರೆ. ಅವರೆಲ್ಲ ಈಗ ವಿರೋಧ ಮಾಡುತ್ತಿರುವುದು ರಾಜಕೀಯ ಪ್ರೇರಿತ ಅಷ್ಟೇ ಎಂದರು. ರಾಜಕೀಯ ಕಾರಣಕ್ಕಾಗಿ ಟಿಪ್ಪು ಜಯಂತಿ ವಿರೋಧ ಮಾಡುತ್ತಿರುವ ಬಿಜೆಪಿ ನಾಯಕರು ಹಿಂದೂ ಮುಸ್ಲಿಂರ ನಡುವೆ ಬೆಂಕಿ ಹಚ್ವುವ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.