Publish Date: Sat, 08 Jul 2023 (15:48 IST)
Updated Date: Sat, 08 Jul 2023 (17:51 IST)
ಬೆಂಗಳೂರು : ಕಾಂಗ್ರೆಸ್ ಘೋಷಿಸಿದ್ದ ಐದು ಗ್ಯಾರಂಟಿಗಳಿಗೆ ಸರ್ಕಾರ ಷರತ್ತುಗಳನ್ನು ಹಾಕುತ್ತಿರುವುದಕ್ಕೆ ಈಗಾಗಲೇ ಬಿಜೆಪಿ ವಿರೋಧ ವ್ಯಕ್ತಪಡಿಸಿತ್ತು. ಆದರೆ ಈಗ ಮತ್ತೆ ಅನ್ನಭಾಗ್ಯದ ಹಣ ವರ್ಗಾವಣೆಗೆ ಹೊಸ ಷರತ್ತು ವಿಧಿಸಿದೆ.
ಕುಟುಂಬದ ಮುಖ್ಯಸ್ಥರನ್ನು ಹೊಂದಿರದ ಅಥವಾ ಒಂದಕ್ಕಿಂತ ಹೆಚ್ಚು ಮುಖ್ಯಸ್ಥರನ್ನು ಹೊಂದಿದ್ದರೆ ಅನ್ನಭಾಗ್ಯದ ನಗದು ವರ್ಗಾವಣೆಯನ್ನು ಸದ್ಯಕ್ಕೆ ನಿಲ್ಲಿಸಲಾಗಿದೆ. ಕುಟುಂಬಸ್ಥರು ಶೀಘ್ರವೇ ಮುಖ್ಯಸ್ಥರು ಯಾರು ಎನ್ನುವುದನ್ನು ನಿರ್ಧರಿಸಬೇಕು. ಅಲ್ಲದೇ ಹಿರಿಯ ಮಹಿಳೆಯನ್ನೇ ಕುಟುಂಬದ ಮುಖ್ಯಸ್ಥರನ್ನಾಗಿ ನೇಮಿಸಬೇಕು ಎಂದು ಸರ್ಕಾರ ಹೊಸ ನಿಯಮ ವಿಧಿಸಿದೆ.
ಈಗಾಗಲೇ ಎರಡನೇ ಮುಖ್ಯಸ್ಥರ ಹೆಸರಿದ್ದರೆ ಆ ಹೆಸರನ್ನು ನಿಷ್ಕ್ರಿಯಗೊಳಿಸಬೇಕು. ನಂತರ ಈ ಮಾಹಿತಿ ಸಲ್ಲಿಸಿದ ಮೇಲೆ ಹಣ ವರ್ಗಾವಣೆ ಮಾಡಲಾಗುವುದು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಪಡಿತರ ಚೀಟಿಯಲ್ಲಿ ಕುಟುಂಬದ ಮುಖ್ಯಸ್ಥರನ್ನು ಹೊಂದಿರದ ಅಥವಾ ಒಂದಕ್ಕಿಂತ ಹೆಚ್ಚು ಮುಖ್ಯಸ್ಥರನ್ನು ಹೊಂದಿರುವ ಪಡಿತರ ಚೀಟಿಯ ಕುಟುಂಬಸ್ಥರಿಗೆ ಹಣ ವರ್ಗಾವಣೆ ಸೌಲಭ್ಯದಿಂದ ಹೊರಗಿರಿಸಲಾಗುತ್ತದೆ. ಕೂಡಲೇ ಇದನ್ನು ಸರಿ ಪಡಿಸಿಕೊಳ್ಳುವಂತೆ ಸೂಚಿಸಲಾಗಿದೆ.