ಬೆಂಗಳೂರು: ಸಿಗಂದೂರು ಸೇತಿವೆ ಉದ್ಘಾಟನೆ ವೇಳೆ ಕೇಂದ್ರ ಸರ್ಕಾರದಿಂದ ಶಿಷ್ಟಾಚಾರ ಉಲ್ಲಂಘನೆಯಾಗಿದೆ ಎಂಬ ಆರೋಪ ಸಂಬಂಧ ಬಿಜೆಪಿ ಪ್ರತಿಕ್ರಿಯಿಸಿ, ಸಿದ್ದರಾಮಯ್ಯರನ್ನು ಅಧಿಕೃತವಾಗಿ ಆಹ್ವಾನಿಸಿದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲು ಬರೆದ ಪತ್ರವನ್ನು ಪೋಸ್ಟ್ ಮಾಡಿದೆ.
ಅದಲ್ಲದೆ ಮುಖ್ಯಮಂತ್ರಿಗಳೇ ಸುಳ್ಳು ಹೇಳೋದು ಬಿಡಿ ಎಂದು ಬಿಜೆಪಿ ವ್ಯಂಗ್ಯ ಮಾಡಿದೆ. ಈ ಸಂಬಂಧ ಬಿಜೆಪಿ ತನ್ನ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿದೆ.
ಸಂಸದರಾದ ಬಿ. ವೈ. ರಾಘವೇಂದ್ರ ಅವರು ಜುಲೈ 9, 2025 ರಂದು, ಕೇಂದ್ರ ಸಚಿವರಾದ ನಿತಿನ್ ಗಡ್ಕರಿ ಅವರು ಜುಲೈ 11, 2025 ರಂದು ಸಿಗಂದೂರು ಸೇತುವೆ ಉದ್ಘಾಟನೆಗೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅಧಿಕೃತವಾಗಿ ಆಹ್ವಾನಿಸಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲು ಬರೆದ ಪತ್ರ ಇಲ್ಲಿದೆ.
ರಾಜ್ಯದ ಅರ್ಧದಷ್ಟು ವಿದ್ಯುತ್ ಒದಗಿಸಲು ತಮ್ಮ ನೆಲವನ್ನು ತ್ಯಾಗ ಮಾಡಿದ ಆ ಭಾಗದ ಜನರು, ಕಳೆದ 60 ವರ್ಷದಿಂದ ರಸ್ತೆ ಸಂಪರ್ಕ, ವೈದ್ಯಕೀಯ ಮುಂತಾದ ಮೂಲಭೂತ ಸೌಲಭ್ಯಗಳಿಲ್ಲದೆ ಸಂಕಷ್ಟ ಪಡುತ್ತಿದ್ದರು. ಆ ಭಾಗದ ಹೋರಾಟಗಾರರ ಮನವಿಗೆ ಸ್ಪಂದಿಸಿದ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಬಿ. ಎಸ್. ಯಡಿಯೂರಪ್ಪ, ಸಂಸದರಾದ ಶ್ರೀ ಬಿ. ವೈ. ರಾಘವೇಂದ್ರ ಹಾಗೂ ಕೇಂದ್ರದ ಬಿಜೆಪಿ ಸರ್ಕಾರದ ಶ್ರಮದಿಂದಾಗಿ ಇಂದು ಆ ಸೇತುವೆ ಎರಡು ತೀರಗಳನ್ನು ಬೆಸೆದಿದೆ.
ಸಿಎಂ ಸಿದ್ದರಾಮಯ್ಯನವರು ರಾಜ್ಯದ ಮಂತ್ರಿಯಾಗಿ, ಉಪಮುಖ್ಯಮಂತ್ರಿಯಾಗಿ, 7 ವರ್ಷ ಮುಖ್ಯಮಂತ್ರಿಯಾಗಿ ಅನೇಕ ಹುದ್ದೆ ಹೊಂದಿದ್ದರೂ ಈ ಸೇತುವೆಗೆ ತಮ್ಮ ಕೊಡುಗೆಯೇನು ಇಲ್ಲ. ಸೇತುವೆ ಉದ್ಘಾಟನೆಗೆ ಅಧಿಕೃತ ಆಹ್ವಾನ ನೀಡಿದ್ದರೂ ಇಂದು ಸುಳ್ಳು ನೆಪ ಹೇಳಿ ರಾಜ್ಯದ ಜನತೆಗೆ ವಂಚಿಸಿದ್ದಲ್ಲದೆ, ಕಾರ್ಯಕ್ರಮಕ್ಕೆ ಗೈರಾಗಿ ಸರ್ವಸ್ವವನ್ನೂ ತ್ಯಾಗ ಮಾಡಿದ ಆ ಭಾಗದ ಜನತೆಯನ್ನು ಅಪಮಾನಿಸಿದ್ದಕ್ಕೆ ಬಹಿರಂಗವಾಗಿ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದೆ.