Publish Date: Sun, 29 Oct 2017 (09:10 IST)
Updated Date: Sun, 29 Oct 2017 (09:14 IST)
ಧರ್ಮಸ್ಥಳ: ಪ್ರಧಾನಿ ನರೇಂದ್ರ ಮೋದಿ ಧರ್ಮಸ್ಥಳಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಧರ್ಮಸ್ಥಳ ಹಾಗೂ ಉಜಿರೆಯಲ್ಲಿ ಹೈ ಅಲರ್ಟ್ ಮಾಡಲಾಗಿದೆ.
ದೇವಾಲಯಕ್ಕೆ ಆಗಮಿಸಲಿರುವ ಮೋದಿಯವರು, ಮಂಜುನಾಥ ದೇವರಿಗೆ ರುದ್ರಾಭೀಷೇಕ ಮಾಡಿಸಲಿದ್ದಾರೆ. ನಂತರ ಅಣ್ಣಪ್ಪ ದೇವರ ದರ್ಶನ ಪಡೆಯಲಿದ್ದಾರೆ. ಇದಾದ ಬಳಿಕ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರೊಂದಿಗೆ ಚರ್ಚೆ ನಡೆಸಿ ಅಲ್ಲಿಂದ ಉಜಿರೆಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಭದ್ರತಾ ದೃಷ್ಟಿಯಿಂದ ಸಿಬ್ಬಂದಿ ಬೆಳಗ್ಗೆಯಿಂದಲೇಧರ್ಮಸ್ಥಳ ಮಂಜುನಾಥ ದೇವಾಲಯದ ಸುತ್ತ ಭದ್ರತಾ ಕಾರ್ಯ ಚುರುಕುಗೊಳಿಸಿದ್ದಾರೆ. ಭಕ್ತರಿಗೆ ದೇವಾಲಯ ಪ್ರವೇಶ ನಿಷೇಧಿಸಿದೆ. ಈಗಾಗಲೇ ಬಾಂಬ್ ಪತ್ತೆದಳದಿಂದ ದೇವಾಲಯದ ಸುತ್ತ ತಪಾಸಣೆ ನಡೆದಿದೆ. ಮುಂಜಾಗ್ರತಾ ಕ್ರಮವಾಗಿ ಧರ್ಮಸ್ಥಳ-ಉಜಿರೆ ರಸ್ತೆಯಲ್ಲಿ ಎಎನ್ಎಫ್ ನಿಂದ ಕೂಂಬಿಂಗ್ ನಡೆಸಿದೆ.
ಮೋದಿ ಆಗಮನ ಹಿನ್ನೆಲೆಯಲ್ಲಿ 2,500ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನ ನೇಮಕ ಮಾಡಲಾಗಿದೆ. 10 ಎಸ್ಪಿ, 150 ಡಿವೈಎಸ್ಪಿ ದರ್ಜೆ ಅಧಿಕಾರಿಗಳು, ಎನ್ಎಸ್ ಜಿ, ಎಸ್ ಪಿಜಿ, ಎಎನ್ಎಫ್, ಬಾಂಬ್ ಪತ್ತೆದಳ ಭದ್ರತೆಗಾಗಿ ನಿಯೋಜನೆಗೊಂಡಿದೆ. ಅಲ್ಲದೆ ಧರ್ಮಸ್ಥಳ-ಉಜಿರೆ ರಸ್ತೆಯಲ್ಲಿ ಕಿಲೋಮೀಟರ್ ಗೆ ಇಬ್ಬರು ಪಿಎಸ್ಐ ಸೇರಿ 40 ಪೊಲೀಸ್ ಸಿಬ್ಬಂದಿಯನ್ನ ನಿಯೋಜಿಸಲಾಗಿದೆ. ಈ ಮಾರ್ಗದಲ್ಲಿ ಮಾರ್ಗದಲ್ಲಿ ಸಾರ್ವಜನಿಕರಿಗೆ ಸಂಚಾರ ನಿಷೇಧಿಸಲಾಗಿದೆ.