Publish Date: Tue, 06 Sep 2022 (18:16 IST)
Updated Date: Tue, 06 Sep 2022 (18:20 IST)
ಸರ್ಕಾರದ ಅವಧಿಯಲ್ಲಿ ಪರಿಶಿಷ್ಟ ಜಾತಿ, ಪಂಗಡದ ಹಾಸ್ಟೆಲ್ಗಳಲ್ಲಿ ದಿಂಬು, ಚಂಬು ಖರೀದಿಯಲ್ಲೂ ನಡೆದ ಭ್ರಷ್ಟಾಚಾರವನ್ನು ಸ್ವಲ್ಪ ನೆನಪಿಸಿಕೊಳ್ಳಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಚಿವ ಸುನೀಲ್ಕುಮಾರ್ ತಿರುಗೇಟು ನೀಡಿದ್ದಾರೆ.
ಇಲಾಖೆ ಯೋಜನೆಗಳ ಕುರಿತು ಸಿದ್ದರಾಮಯ್ಯ ಮಾಡಿದ್ದ ಟೀಕೆಗೆ ಪ್ರತಿಕ್ರಿಯಿಸಿರುವ ಅವರು, ಸಿದ್ದರಾಮಯ್ಯ ಅವರೇ, ಅಜ್ಞಾನದ ಕತ್ತಲೆಯಿಂದ ಜ್ಞಾನದ ಬೆಳಕಿನೆಡೆಗೆ ನೀವು ಸಮಾಜವನ್ನು ಕೊಂಡೊಯ್ಯುವುದು ಯಾವಾಗ, ಪರಿಶಿಷ್ಟ ಜಾತಿ ಹಾಗೂ ಪಂಗಡದ ಬಿಪಿಎಲ್ ಕುಟುಂಬಗಳಿಗೆ ಉಚಿತವಾಗಿ 75 ಯುನಿಟ್ ವಿದ್ಯುತ್ ನೀಡುವ ಆದೇಶವನ್ನು ವಾಪಸ್ ಪಡೆಯಲಾಗಿದೆ ಎಂದು ಸುಳ್ಳು ಪ್ರಚಾರ ಮಾಡಿ ನೀವು ಸಾಧಿಸುವ ಸಾಮಾಜಿಕ ನ್ಯಾಯವಾದರೂ ಏನು ಎಂದು ಪ್ರಶ್ನಿಸಿದ್ದಾರೆ.
ಹಿಂದಿನ ಆದೇಶ ವಾಪಸ್ ಪಡೆಯುವುದಕ್ಕೂ, ಘೋಷಿತ ಯೋಜನೆ ಸ್ಥಗಿತಗೊಳಿಸುವುದಕ್ಕೂ ಇರುವ ಆಡಳಿತಾತ್ಮಕ ವ್ಯತ್ಯಾಸವೂ ಗೊತ್ತಿಲ್ಲದಷ್ಟು ಅಜ್ಞಾನ ನಿಮ್ಮನ್ನು ಕಾಡುತ್ತಿದೆಯೇ, ನಿಮ್ಮ ಪಕ್ಷದ ಸಾಮಾಜಿಕ ಜಾಲತಾಣದ ಕೆಲ ಪೆದ್ದರು ಕೊಟ್ಟ ದಾಖಲೆಯನ್ನೇ ಆಧಾರವಾಗಿಟ್ಟುಕೊಂಡು ಜನರನ್ನು ಹಾದಿ ತಪ್ಪಿಸಲು ಹೊರಟಿದ್ದೀರಿ ಎಂದು ಕಿಡಿಕಾರಿದ್ದಾರೆ.