Publish Date: Mon, 18 Sep 2017 (14:19 IST)
Updated Date: Mon, 18 Sep 2017 (14:22 IST)
ಕಲಬುರ್ಗಿ: ಮಾಜಿ ಸಚಿವ ಖಮರುಲ್ ಇಸ್ಲಾಂ ನಿಧನ ವಾರ್ತೆ ಕೇಳಿ ಅವರ ಮನೆಗೆ ಬೆಂಬಲಿಗರು, ಮಠಾಧೀಶರು, ಸಂಬಂಧಿಗಳ ದಂಡು ಹರಿದು ಬರುತ್ತಿದೆ.
ಖಮರುಲ್ ಇಸ್ಲಾಂ ನಿಧನ ಹೊಂದಿದ ವಿಷಯ ಕೇಳಿ ಅಭಿಮಾನಿಗಳ ದುಃಖದ ಕಟ್ಟೆ ಒಡೆದಿದ್ದು, ಅಗಲಿದ ತಮ್ಮ ನಾಯಕನನ್ನು ನೆನೆದು ಕಣ್ಣಿರಿಡುತ್ತಿದ್ದಾರೆ. ನಗರದ ನೊಬೆಲ್ ಶಾಲೆಯ ಸಮೀಪವಿರುವ ಖಮರುಲ್ ಇಸ್ಲಾಂ ಅವರ ಮನೆಗೆ ಜನ ಸಾಗರವೇ ಹರಿದು ಬರುತ್ತಿದೆ. ಮುಸ್ಲಿಂ ಬಡಾವಣೆಗಳು ಸೇರಿದಂತೆ ಕೆಲವೆಡೆ ಅಂಗಡಿ ಮುಂಗಟ್ಟು ಮುಚ್ಚಿ ಜನರು ಖಮರುಲ್ ಅವರ ಮನೆಯತ್ತ ಬರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಬಂದೋಬಸ್ತ್ ಕೈಗೊಂಡಿದ್ದಾರೆ. ಶಾಂತಿ ಕಾಪಾಡುವಂತೆ ಕುಟುಂಬದವರು ಮನವಿ ಮಾಡಿದ್ದಾರೆ.
ಖಮರುಲ್ ಇಸ್ಲಾಂ ಎಂದರೆ ಭಾವೈಕ್ಯತೆಯ ನಿಧಿ. ಅವರಲ್ಲಿ ಜಾತಿ ಮನೋಭಾವ ಇರಲಿಲ್ಲ. ಅವರಿಗೆ ಸರ್ವಧರ್ಮ ಸಮ್ಮೇಳನ ಮಾಡುವ ಆಸೆಯಿತ್ತು. ಖಮರುಲ್ ಇಸ್ಲಾಂ ಸುಲಫುಲ ಮಠಕ್ಕೆ ಭದ್ರ ಬುನಾದಿ ಹಾಕಿದ್ದು, ಪ್ರತಿಯೊಂದು ಕಲ್ಲು ಸಹ ಅವರ ಹೆಸರು ಹೇಳುತ್ತೆ. ಖಮರುಲ್ ಇಸ್ಲಾಂ ಅಗಲಿಕೆಯಿಂದ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಕುಟುಂಬಸ್ಥರು ಮತ್ತು ಬೆಂಬಲಿಗರಿಗೆ ನೋವು ಸಹಿಸುವ ಶಕ್ತಿ ದೇವರು ನೀಡಲಿ ಎಂದು ಸುಲಫುಲ ಮಠದ ಶ್ರೀಗಳು ಹೇಳಿದ್ದಾರೆ.