Publish Date: Tue, 13 Jul 2021 (20:32 IST)
Updated Date: Tue, 13 Jul 2021 (20:34 IST)
ಕೊರೊನಾ ಎರಡನೇ ಅಲೆ ಕಡಿಮೆ ಆಗಿದ್ದರೂ ಮೂರನೇ ಅಲೆ ಬರೋದಿಲ್ಲ ಅಂತೇನಿಲ್ಲ. ಆದರೂ ಜನರು ಮುನ್ನೆಚ್ಚರಿಕೆ ಇಲ್ಲದೇ ಸೇರುವುದು ನೋಡಿದರೆ ಭಯ ಆಗುತ್ತದೆ ಎಂದು ಆರೋಗ್ಯ ಸಚಿವ ಕೆ.ಸುಧಾಕರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನ ದೇವಸ್ಥಾನ, ಮಾರ್ಕೆಟ್ ಗಳಲ್ಲಿ ಮಿತಿಮೀರಿದ ಸಂಖ್ಯೆಯಲ್ಲಿ ಸೇರುತ್ತಿದ್ದಾರೆ. ಇದನ್ನು ಗಮನಿಸಿದರೆ ಭಯವಾಗುತ್ತದೆ. ಜನರು ಎಚ್ಚರಿಕೆಯಿಂದ ಇರಬೇಕು ಎಂದರು.
ಮೂರನೇ ಅಲೆ ಎದುರಾಗುವ ಅವಕಾಶ ನಾವು ಕೊಡಬಾರದು. ನಮ್ಮ ನಡವಳಿಕೆಗಳಲ್ಲಿ ಬದಲಾವಣೆ ಮಾಡಿಕೊಳ್ಳಬೇಕು. ನೂರು ಜನಕ್ಕೆ ಮದುವೆಗೆ ಅವಕಾಶ ಕೊಡಲಾಗಿದೆ. ಆದರೆ ನಾನ್ನೂರು ಐನೂರು ಜನ ಸೇರುತ್ತಿದ್ದಾರೆ. ಮಾರುಕಟ್ಟೆಗಳಲ್ಲಿ ಮಿತಿಮೀರಿದ ಜನ ಸೆರುತ್ತಿದ್ದಾರೆ. ಇದು ಬಹಳ ಅಸಮಾಧಾನ ಆಗಿದೆ. ಇನ್ನೂ ಮೂರರಿಂದ ನಾಲ್ಕು ತಿಂಗಳ ಕಾಲ ಎಚ್ಚರಿಕೆಯಿಂದ ಇರಬೇಕು ಎಂದು ಅವರು ಸಲಹೆ ನೀಡಿದರು.
ನೈಟ್ ಕರ್ಪ್ಯೂ ಮುಂದುವರೆಸಬೇಕಾ ಅಥವಾ ನಿಲ್ಲಿಸಬೇಕಾ ಎಂಬ ವಿಚಾರದ ಕುರಿತು ಸಂಜೆ ಮುಖ್ಯಮಂತ್ರಿಗಳ ಜೊತೆ ಚರ್ಚೆ ಮಾಡುತ್ತೇನೆ. ನಂತರ ಇದರ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಲಸಿಕೆಯನ್ನು ತೆಗೆದು ಕೊಂಡರೂ ಎಚ್ಚರಿಕೆಯಿಂದ ಇರಬೇಕು ಎಂದು ಸುಧಾಕರ್ ಹೇಳಿದರು.
ಕೇರಳ ಮತ್ತು ಮಹಾರಾಷ್ಟ್ರಗಳಲ್ಲಿ ಕೊರೊನಾ ಕೇಸ್ ಗಳು ಹೆಚ್ಚಾಗಿವೆ. ನಮ್ಮ ರಾಜ್ಯದಂತೆ ಕೇರಳದಲ್ಲಿ ಎರಡನೇ ಅಲೆ ಕಡಿಮೆ ಆಗಲೇ ಇಲ್ಲ. ಪಾಸಿಟಿವಿಟಿ ರೇಟ್ ಕಡಿಮೆ ಆಗಲೇ ಇಲ್ಲ. ಕರ್ನಾಟಕದಲ್ಲಿ ಬಹಳ ಕಡಿಮೆ ಆಗಿದೆ. ಇನ್ನೂ ಕಡಿಮೆ ಆಗಬೇಕು. ಮೂರು ಸಾವಿರ ಕೇಸ್ ಗಿಂತ ಹೆಚ್ಚು ಪಾಸಿಟಿವ್ ಕೇಸ್ ಬಂದರೆ ಅದು ನಮಗೆ ಎಚ್ಚರಿಕೆ ಗಂಟೆ. ಎರಡನೇ ಅಲೆಯಂತೆ ಮತ್ತೆ ಮರುಕಳಿಸದಂತೆ ಎಚ್ಚರಿಕೆ ವಹಿಸುತ್ತೇವೆ. ಮೂರನೇ ಅಲೆ ಪ್ರಾರಂಭವಾಗಿಲ್ಲ. ಕೆಲವು ದಿನಗಳು ಕಾಯಬೇಕು ನಂತರ ಗೊತ್ತಾಗುತ್ತೆ ಎಂದು ಅವರು ವಿವರಿಸಿದರು.