Publish Date: Tue, 19 Jul 2022 (15:29 IST)
Updated Date: Tue, 19 Jul 2022 (16:39 IST)
ಮಾರತ ಹಳ್ಳಿಯ ಸಂಜಯನಗರದಲ್ಲಿ ಅಳಿಯ ತನ್ನ ಪತ್ನಿಯ ಅಮ್ಮನನ್ನೇ ಸುತ್ತಿಗೆಯಲ್ಲಿ ಹೊಡೆದು ಕೊಂದಿರುವ ಘಟನೆ ನಡೆದಿದೆ.
ಕೊಲೆಗಾರನನ್ನು ನಾಗರಾಜ ಎಂದು ಗುರುತಿಸಲಾಗಿದೆ. ಅಳಿಯನಿಂದಲೇ ಕೊಲೆಯಾದ ದುರ್ದೈವಿ ಅತ್ತೆಯನ್ನು ಸೌಭಾಗ್ಯ ಎಂದು ಗುರುತಿಸಲಾಗಿದೆ.
ಜು 13ರಂದು ಈ ಘಟನೆ ನಡೆದಿದೆ. ಕಳೆದ 6 ವರ್ಷದ ಹಿಂದೆ ನಾಗರಾಜ (35) ಸೌಭಾಗ್ಯ ಅವರ ಮಗಳು ಭವ್ಯಶ್ರೀಯನ್ನು ಮದುವೆಯಾಗಿದ್ದ, ಈ ದಂಪತಿಗೆ 5 ವರ್ಷದ ಮಗು ಕೂಡ ಇದೆ. ಡ್ರೈವಿಂಗ್ ಕೆಲಸ ಮಾಡ್ಕೊಂಡಿದ್ದ ನಾಗರಾಜ ಕುಡಿತ ಚಟಕ್ಕೆ ಬಿದ್ದಿದ್ದ. ಹಾಗಾಗಿ ಆಗಾಗ ಮನೆಯಲ್ಲಿ ಗಲಾಟೆ ಆಗ್ತಾ ಇತ್ತು.
ಗಂಡನ ಕಾಟ ತಾಳಲಾರದೆ ಸಂಜಯನಗರದಲ್ಲಿರುವ ತಾಯಿ ಮನೆಗೆ ಭವ್ಯಶ್ರೀ ಬಂದಿದ್ದಳು. ಮೂರು ವರ್ಷದಿಂದ ಬಂದು ತಾಯಿ ಮನೆಯಲ್ಲಿಯೇ ಭವ್ಯಶ್ರೀ ವಾಸವಿದ್ದರು. ಆದರೆ ಕುಡಿದ ಅಮಲಿನಲ್ಲಿ ಜುಲೈ 12 ರ ಮಂಗಳವಾರ ಅತ್ತೆ ಮನೆ ಬಳಿ ಬಂದು ನಾಗರಾಜ್ ಗಲಾಟೆ ಮಾಡಿದ್ದ. ಹೆಂಡತಿಯನ್ನು ತನ್ನೊಟ್ಟಿಗೆ ಕಳಿಸಿಕೊಡುವಂತೆ ಗಲಾಟೆಗೆ ಮುಂದಾಗಿದ್ದಾನೆ. ಈ ವೇಳೆ ಸೌಭಾಗ್ಯ ಕುಟುಂಬಸ್ಥರು ಬುದ್ಧಿ ಹೇಳಿ ಕಳುಹಿಸಿದ್ದರು.
ಸೌಭಾಗ್ಯ ಸಂಜಯನಗರದಲ್ಲಿ ಸೊಪ್ಪು ವ್ಯಾಪಾರ ಮಾಡಿ ಜೀವನ ಕಟ್ಟಿಕೊಂಡಿದ್ದರು. ಈ ಜಾಗಕ್ಕೆ ಬಂದು ಸುತ್ತಿಗೆಯಿಂದ ಹಲ್ಲೆ ಮಾಡಿ ನಾಗರಾಜ್ ಹತ್ಯೆ ಮಾಡಿದ್ದಾನೆ. ಸ್ಥಳದಲ್ಲೇ ರಕ್ತಸ್ರಾವದಿಂದ ಕುಸಿದು ಬಿದ್ದಿದ್ದ ಸೌಭಾಗ್ಯ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸೌಭಾಗ್ಯ ಸಾವನ್ನಪ್ಪಿದ್ದಾರೆ.
ಘಟನೆ ಸಂಬಂಧ ಹೆಚ್ ಎ ಎಲ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿ ನಾಗರಾಜ್ ಹೆಚ್ಎಎಲ್ ಪೊಲೀಸರು ಬಂಧಿಸಿದ್ದಾರೆ.