ಗುಂಡ್ಲುಪೇಟೆ ಮತ್ತು ನಂಜನಗೂಡು ಉಪಚುನಾವಣಾ ಕಣದಲ್ಲಿ ಇಂದು ದಿಗ್ಗಜ ನಾಯಕರಿಂದ ಪ್ರಚಾರ ನಡೆಯಲಿದೆ. ಬಿಜೆಪಿ ಸೇರ್ಪಡೆಗೊಂಡಿರುವ ಮಾಜಿ ಸಿಎಂ ಎಸ್.ಎಂ. ಕೃಷ್ಣ ಬಹಿರಂಗ ಸಮಾವೇಶದಲ್ಲಿ ಭಾಗವಹಿಸುತ್ತಿದ್ದಾರೆ.
ಬೆಳಗ್ಗೆ 11.30ಕ್ಕೆ ನಂಜನಗೂಡಿನಲ್ಲಿ ಪತ್ರಿಕಾಗೋಷ್ಠಿ ನಡೆಸಲಿರುವ ಎಸ್.ಎಂ. ಕೃಷ್ಣ ಗುಂಡ್ಲುಪೇಟೆಯ ಅಂಬೇಡ್ಕರ್ ಭವನದ ಸಮೀಪ ನಡೆಯಲಿರುವ ಬಿಜೆಪಿ ಸಮಾವೇಶದಲ್ಲಿ ಭಾಗವಹಿಸುತ್ತಿದ್ದಾರೆ. ಕೇಂದ್ರ ಸಚಿವರಾದ ಅನಂತ್ ಕುಮಾರ್, ಸದಾನಂದಗೌಡ, ಮಾಜಿ ಸಿಎಂ ಯಡಿಯೂರಪ್ಪ ಸಹ ಭಾಗವಹಿಸಲಿದ್ದಾರೆ.
ಇತ್ತ, ಸಿಎಂ ಸಿದ್ದರಾಮಯ್ಯ ಸಹ ಬೃಹತ್ ರೋಡ್ ಶೋ ನಡೆಸಲಿದ್ದಾರೆ. 10 ಸಚಿವರ ಜೊತೆ ಸಿದ್ದರಾಮಯ್ಯ ಪ್ರಚಾರ ನಡೆಸಲಿದ್ದಾರೆ. ಚುನಾವಣೆಗೆ ಕೆಲ ದಿನಗಳು ಮಾತ್ರ ಬಾಕಿ ಉಳಿದಿದ್ದು, ಬಿರುಸಿನ ಪ್ರಚಾರ ನಡೆಯಲಿದೆ.
ರೈಲಿನ ಮೂಲಕ ಮೈಸೂರಿಗೆ ತೆರಳಿರುವ ಎಸ್.ಎಂ. ಕೃಷ್ಣ ಸುದ್ದಿಗಾರರ ಜೊತೆ ಮಾತನಾಡಿ, ಮುಂದೆ ಮಾಡಲಿರುವ ಹಲವು ಪ್ರಚಾರಗಳಿಗೆ ಇದು ಆರಂಭ. ಈ ದೇಶ ಶಕ್ತಿಶಾಲಿ ದೇಶವಾಗಬೇಕು. ಅಮೆರಿಕ ಮತ್ತು ಚೀನಾಗೆ ಸರಿಸಮಾನವಾಗಿ ನಿಲ್ಲಬೇಕು ಎಂಬುದು ಪ್ರತಿಯೊಬ್ಬನ ಭಾರತೀಯನ ಆಶಯ.ಅದೆಕ್ಕಾಗಿ ಒಬ್ಬ ಬಲಿಷ್ಠ ನಾಯಕನ ಅಗತ್ಯವಿದ್ದು, ಅದಕ್ಕೆ ಎಲ್ಲರ ಬೆಂಬಲ ಸಿಗಲಿದೆ ಎಂದು ಹೇಳಿದ್ದಾರೆ.