Select Your Language

Notifications

webdunia
webdunia
webdunia
webdunia

ಕಾವೇರಿ ಸಭೆ: ಉಭಯ ರಾಜ್ಯಗಳಿಗೆ ತಜ್ಞರ ತಂಡ ಕಳುಹಿಸಲು ಸಿದ್ದರಾಮಯ್ಯ ಮನವಿ

ಕಾವೇರಿ ಸಭೆ: ಉಭಯ ರಾಜ್ಯಗಳಿಗೆ ತಜ್ಞರ ತಂಡ ಕಳುಹಿಸಲು ಸಿದ್ದರಾಮಯ್ಯ ಮನವಿ
ನವದೆಹಲಿ , ಗುರುವಾರ, 29 ಸೆಪ್ಟಂಬರ್ 2016 (17:21 IST)
ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಕೇಂದ್ರ ಮಧ್ಯಸ್ಥಿಕೆಯಲ್ಲಿ ನಡೆದ ಉಭಯ ರಾಜ್ಯಗಳ ಸಂಧಾನ ಸಭೆಯಲ್ಲಿ ಎರಡು ರಾಜ್ಯಗಳಿಗೂ ತಜ್ಞರ ತಂಡ ಕಳುಹಿಸಿ ನೀರಿನ ಲಭ್ಯತೆ ಕುರಿತು ಪರಿಶೀಲನೆ ನಡೆಸುವಂತೆ ಮನವಿ ಮಾಡಿಕೊಂಡಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. 
 
ಉಭಯ ರಾಜ್ಯಗಳ ಸಂಧಾನ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಉಭಯ ರಾಜ್ಯಗಳಿಗೆ ತಜ್ಞರ ಸಮಿತಿ ಕಳುಹಿಸಿ ವರದಿ ನೀಡಲಿ. ತಜ್ಞರ ವರದಿಯ ಆಧಾರದ ಮೇಲೆ ಉಭಯ ರಾಜ್ಯಗಳ ವಾಸ್ತವ ಪರಿಸ್ಥಿತಿ ತಿಳಿಯುತ್ತದೆ. ಆದರೆ, ತಜ್ಞರ ಸಮಿತಿ ರಚಿಸಲು ತಮಿಳುನಾಡು ಒಪ್ಪುತ್ತಿಲ್ಲ. ಹಾಗೂ ಸುಪ್ರೀಂಕೋರ್ಟ್‌ನಲ್ಲೂ ನಾವು ಆಕ್ಷೇಪಣೆ ಸಲ್ಲಿಸುತ್ತೇವೆ ಎಂದು ಪಟ್ಟು ಹಿಡಿದಿದೆ ಎಂದರು.
 
ಕಾವೇರಿ ನದಿ ನೀರನ್ನು ಕೇವಲ ಕುಡಿಯಲು ಮಾತ್ರ ಬಳಸಿಕೊಳ್ಳಬೇಕು ಎಂದು ವಿಧಾನ ಮಂಡಲ ಅಧಿವೇಶನದಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಹರಿಸದಂತೆ ಜೆಡಿಎಸ್ ವರಿಷ್ಠ ಎಚ್‌.ಡಿ.ದೇವೇಗೌಡರು ಸಹ ಸೂಚನೆ ನೀಡಿದ್ದಾರೆ. ವಿಧಾನ ಮಂಡಲದ ಸರ್ವಾನುಮತದ ನಿರ್ಣಯಕ್ಕೆ ನಾವು ಬದ್ಧವಾಗಿದ್ದೇವೆ ಎಂದು ಸ್ಪಷ್ಟಪಡಿಸಿದರು.
 
ನಾವು ಕುಡಿಯಲು ನೀರು ಕೇಳುತ್ತಿದ್ದೇವೆ. ಆದರೆ, ತಮಿಳುನಾಡು ಕುರುವೈ ಬೆಳೆ ಬೆಳೆಯಲು ನೀರು ಕೇಳುತ್ತಿದೆ. ಮೆಟ್ಟುರು ಜಲಾಶಯದಲ್ಲಿ 43 ಟಿಎಂಸಿ ನೀರು ಇದೆ. ತಮಿಳುನಾಡಿನಲ್ಲಿ ಅಕ್ಟೋಬರ್‌ನಿಂದ ಡಿಸೆಂಬರ್ ತಿಂಗಳವರೆಗೂ ಮಳೆಯಿಂದ ಹೆಚ್ಚುವರಿ 20 ಟಿಎಂಸಿ ನೀರು ಲಭ್ಯವಾಗುತ್ತೆ. ಅವರು 18.5 ಲಕ್ಷ ಹೆಕ್ಟರ್ ಪ್ರದೇಶದಲ್ಲಿ ಬೆಳೆ ಬೆಳೆಯುತ್ತಿದ್ದಾರೆ. ಆದರೆ, ನಾವು ಕೇವಲ 6.5 ಲಕ್ಷ ಹೆಕ್ಟರ್ ಪ್ರದೇಶದಲ್ಲಿ ಬೆಳೆ ಬೆಳೆಯುತ್ತಿದ್ದೇವೆ. ಈಗಾಗಲೇ ನಮ್ಮ ರೈತರು ಸಾಕಷ್ಟು ತ್ಯಾಗ ಮಾಡಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು. 
 
ಸುಪ್ರೀಂ ಆದೇಶದಂತೆ 10 ದಿನಗಳ ಕಾಲ 15 ಟಿಎಂಸಿ ನೀರು ಬಿಡುಗಡೆ ಮಾಡಿದ್ದೇವೆ. ಇಗ ರಾಜ್ಯದ ವಾಸ್ತವ ಪರಿಸ್ಥಿತಿ ಹಾಗೂ ಸದನದ ನಿರ್ಣಯ ಕುರಿತು ಮನವರಿಕೆ ಮಾಡಿಕೊಟ್ಟಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ನಮೋ ಬ್ರಿಗೇಡ್‌ನಿಂದ ಮೋದಿ ಪಿಎಂ, ರಾಯಣ್ಣ ಬ್ರಿಗೇಡ್‌ನಿಂದ ಬಿಎಸ್‌ವೈ ಸಿಎಂ: ಈಶ್ವರಪ್ಪ