Publish Date: Fri, 11 Oct 2019 (17:08 IST)
Updated Date: Fri, 11 Oct 2019 (17:10 IST)
ಪ್ರವಾಹದಿಂದ ಬೆಳೆ, ಬದುಕು ಕಳೆದುಕೊಂಡ ರೈತಾಪಿ ವರ್ಗ ಅಳಿದುಳಿದ ಜಮೀನಿನ ಬೆಳೆಯಲ್ಲೇ ಸೀಗೆ ಹುಣ್ಣಿಮೆ ಆಚರಿಸಿದ್ದು, ಜಮೀನಿನ ಪರಿಸ್ಥಿತಿ ಕಂಡು ಹಬ್ಬದಲ್ಲೂ ಕಣ್ಣೀರು ಹಾಕಿದ್ದಾರೆ.
ಧಾರವಾಡ ಜಿಲ್ಲೆಯ ಕೆಲಭಾಗಗಳಲ್ಲಿ ರೈತ ಸಮೂಹ ಸೀಗೆ ಹುಣ್ಣಿಮೆಯನ್ನು ಶ್ರದ್ಧಾ-ಭಕ್ತಿಗಳೊಂದಿಗೆ ಸಂಭ್ರಮದಿಂದ ಆಚರಿಸಿತು. ಈ ಬಾರಿ ಮಳೆಯಿಂದಾಗಿ ರೈತ ಸಮೂಹ ತೀವ್ರ ಸಂಕಷ್ಟದಲ್ಲಿದೆ. ಆದರೂ ಕೂಡ ಸಂಪ್ರದಾಯವನ್ನು ಕೈಬಿಡಬಾರದೆಂಬ ಉದ್ದೇಶದಿಂದ ರೈತರು ಭೂದೇವಿಯ ಆರಾಧನೆಯಲ್ಲಿ ನಿರತವಾಗಿ ವಿಶೇಷವಾಗಿ ಗಮನ ಸೆಳೆದರು.
ವಿಜಯದಶಮಿಯ ಬಳಿಕ ಬರುವ ಸೀಗೆ ಹುಣ್ಣಿಮೆಗೆ ಗ್ರಾಮೀಣ ಭಾಗದಲ್ಲಿ ವಿಶೇಷ ಮಹತ್ವ ನೀಡಲಾಗುತ್ತದೆ. ಬೆಳಗ್ಗೆ ಮನೆಯಲ್ಲಿ 5 ಬಗೆಯ ಕಾಳುಗಳನ್ನು ಕುದಿಸಿ ಅವುಗಳನ್ನು ಹೊಲದ ಸುತ್ತಲೂ ಚರಗ ರೂಪದಲ್ಲಿ ಚೆಲ್ಲುವ ಸಂಪ್ರದಾಯವಿದೆ.
ಹೀಗೆ ಚರಗ ಚೆಲ್ಲುವುದರಿಂದ ಫಸಲು ಸಮದ್ಧವಾಗಿರಲಿದೆ ಎನ್ನುವ ನಂಬಿಕೆ ಜನಪದದಲ್ಲಿದೆ. ಜಾನುವಾರುಗಳ ಮೈತೊಳೆದು ಸಿಂಗರಿಸುವುದು ಸಂಪ್ರದಾಯವಾಗಿದೆ. ಹೊಲಗಳಲ್ಲಿ ಪೂಜೆ ಮಾಡಿ ಚರಗಾ ಚಲ್ಲಿದರೇ ಕೆಲವು ಕುಟುಂಬಗಳು ಚಕ್ಕಡಿ ಕಟ್ಟಿಕೊಂಡು ಕುಟುಂಬ ಸದಸ್ಯರ ಜೊತೆಗೆ ತಮ್ಮ ಕೃಷಿ ಭೂಮಿಗೆ ತೆರಳಿದ್ರು. ಬೆಳೆದು ನಿಂತಿರುವ ಫಸಲಿಗೆ ಪೂಜೆ ಸಲ್ಲಿಸಿ, ಧನ್ಯತಾ ಭಾವದಲ್ಲಿ ತೇಲಿದರು.
ಪ್ರವಾಹದಿಂದ ನೀರುಪಾಲಾದ ಬೆಳೆಯನ್ನು ಕಂಡು ಕೆಲವು ರೈತರು ಹಬ್ಬದ ಸಂಭ್ರಮದಲ್ಲೂ ಕಣ್ಣೀರು ಹಾಕಿದ್ದಾರೆ.