Publish Date: Tue, 18 Oct 2016 (12:57 IST)
Updated Date: Fri, 22 Nov 2019 (14:02 IST)
ಹುಬ್ಬಳ್ಳಿ: ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರ ಕೆಲವರನ್ನು ಎತ್ತಿಕಟ್ಟಿ ಆರ್.ಎಸ್.ಎಸ್. ಕಾರ್ಯಕರ್ತರನ್ನು ಹತ್ಯೆ ನಡೆಸಲು ಕುಮ್ಮಕ್ಕು ನೀಡುತ್ತಿದೆ ಎಂದು ಮಾಜಿ ಸಚಿವ ಬಿ.ಜೆ. ಪುಟ್ಟಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ರಾಜ್ಯದಲ್ಲಿ ಅಶಾಂತಿ ಸೃಷ್ಟಿಸುತ್ತ, ವರ್ಗ ಸಂಘರ್ಷಕ್ಕೆ ಮುನ್ನುಡಿ ಬರೆಯುತ್ತಿದೆ ಎಂದು ಆರೋಪಿಸುತ್ತ, ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡರು.
ಮಂಗಳೂರಿನಲ್ಲಿ ಪ್ರಶಾಂತ ಪೂಜಾರಿ, ಮೈಸೂರಲ್ಲಿ ರಾಜು, ಕೂರ್ಗಲ್ಲಿ ಪುಟ್ಟಪ್ಪ, ಧಾರವಾಡದಲ್ಲಿ ಯೋಗೇಶ ಗೌಡ ಹಾಗೂ ಬೆಂಗಳೂರಲ್ಲಿ ರುದ್ರೇಶ ಎನ್ನುವವರು ಹಾಡುಹಗಲೆ ಹತ್ಯೆಯಾಗಿದ್ದಾರೆ. ಇವರೆಲ್ಲರೂ ಆರ್.ಎಸ್.ಎಸ್. ಕಾರ್ಯಕರ್ತರಾಗಿದ್ದು, ಉದ್ದೇಶ ಪೂರ್ವಕವಾಗಿ ಹತ್ಯೆ ಮಾಡಲಾಗಿದೆ. ಇಂತಹ ಕಾನೂನು ಬಾಹಿರ ಕೃತ್ಯಗಳು ನಡೆದರು ಯಾವೊಬ್ಬ ಕೊಲೆಗಡುಕರನ್ನು ಈವರೆಗೆ ಬಂಧಿಸಿಲ್ಲ. ಸರಕಾರದ ನಡೆಯನ್ನು ಗಮನಿಸಿದರೆ, ಕೊಲೆಗಾರರ ಬೆನ್ನಿಗೆ ನಿಂತಿದೆ ಎಂದೆನಿಸುತ್ತದೆ. ಆರೋಪಿಗಳ ವಿರುದ್ಧ ಪೊಲೀಸರು ಯಾವ ಕ್ರಮ ಕೈಗೊಳ್ಳದಂತೆ ತಡೆಯೊಡ್ಡುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ಜನಸಾಮಾನ್ಯರಿಗೆ ರಕ್ಷಣೆಯಿಲ್ಲದಂತಾಗಿದೆ. ಒಂದು ವರ್ಗವನ್ನು ಇನ್ನೊಂದು ವರ್ಗಕ್ಕೆ ಎತ್ತಿಕಟ್ಟುವ ಮೂಲಕ ಭಯೋತ್ಪಾದನೆಗೆ ಪ್ರಚೋದನೆ ನೀಡುತ್ತದೆ. ಇಂತಹ ಪುಂಡಾಟಿಕೆ ಸರಕಾರಕ್ಕೆ ಮುಂದಿನ ದಿನಗಳಲ್ಲಿ ಜನರೇ ತಕ್ಕ ಉತ್ತರ ನೀಡಲಿದ್ದಾರೆ ಎಂದರು.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.